


7th June 2026
ಬಳ್ಳಾರಿ, ಜೂ. 7: ಸುಸ್ಥಿರ ಅಭಿವೃದ್ಧಿ, ನವೀಕರಿಸಬಹುದಾದ ಇಂಧನ ಬಳಕೆ ಹಾಗೂ ಪರಿಸರ ಸ್ನೇಹಿ ತಂತ್ರಜ್ಞಾನಗಳ ಅಳವಡಿಕೆಗೆ ಇಂಜಿನಿಯರ್ಗಳು ಮತ್ತು ತಂತ್ರಜ್ಞರು ಹೆಚ್ಚಿನ ಆದ್ಯತೆ ನೀಡಬೇಕೆಂದು ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಎ.ಎಸ್. ಸತ್ಯನಾರಾಯಣ ಕರೆ ನೀಡಿದರು.
ನಗರದ ಮೋಕಾ ರಸ್ತೆಯ ಸಂಗನಕಲ್ಲು ಸಮೀಪದ ಪ್ರಕೃತಿ ಲೇಔಟ್ನಲ್ಲಿರುವ ಎಸಿಸಿಇಎ ನಿವೇಶನದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂಜಿನಿಯರ್ಗಳು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಹಾಗೂ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಬಳಸುವ ಮೂಲಕ ಪರಿಸರ ಸ್ನೇಹಿ ಕಟ್ಟಡಗಳನ್ನು ನಿರ್ಮಿಸಲು ಮುಂದಾಗಬೇಕು. ಜೊತೆಗೆ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟು ಹಸಿರು ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಅವರು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಇಂಜಿನಿಯರ್ ಈಶ್ವರಗೌಡ ಮಾತನಾಡಿ, ಹಳೆಯ ಪತ್ರಿಕೆಗಳನ್ನು ಮರುಬಳಕೆ ಮಾಡಿ ಪೆನ್ಸಿಲ್ ತಯಾರಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಅವುಗಳನ್ನು ಬಡ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸುವ ಉದ್ದೇಶ ಹೊಂದಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಜೋನಲ್ ಕಮಿಷನರ್ ಗುರುರಾಜ್ ಸೌದಿ, ಎಇಇ ವಿರೇಶ್, ಹಿರಿಯ ಇಂಜಿನಿಯರ್ಗಳಾದ ಜೆ.ಎಲ್. ಶ್ರೀನಿವಾಸ್ ಹಾಗೂ ಸಿ.ಬಿ. ಶ್ರೀನಿವಾಸ ರೆಡ್ಡಿ ಸೇರಿದಂತೆ ಹಲವು ಗಣ್ಯರನ್ನು ಸಸಿಗಳನ್ನು ನೀಡಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಅಸೋಸಿಯೇಷನ್ ಉಪಾಧ್ಯಕ್ಷ ಶಶಿಧರ ಗಜೇಂದ್ರಗಡ, ಕಾರ್ಯದರ್ಶಿ ರಾಕೇಶ್ ಬಿ.ಟಿ., ಜಂಟಿ ಕಾರ್ಯದರ್ಶಿಗಳಾದ ಸುಭಾಷ್ ಚಂದ್ರ ಹಾಗೂ ಆರ್. ಸುನೀಲ್, ಖಜಾಂಚಿ ನಿರಂಜನ್ ಪಿ.ಎಂ., ಸಹ ಖಜಾಂಚಿ ಬಿ. ಮೂರ್ತಿ ಸೇರಿದಂತೆ ಅಸೋಸಿಯೇಷನ್ ಸದಸ್ಯರು, ಇಂಜಿನಿಯರ್ಗಳು, ವಾಸ್ತುಶಿಲ್ಪಿಗಳು ಹಾಗೂ ಉದ್ಯಮಿಗಳು ಭಾಗವಹಿಸಿದ್ದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆ, ಹಸಿರು ತಂತ್ರಜ್ಞಾನ ಮತ್ತು ಸುಸ್ಥಿರ ಅಭಿವೃದ್ಧಿಯ ಕುರಿತು ಜಾಗೃತಿ ಮೂಡಿಸಲಾಯಿತು.

7th June 2026
ಬೆಂಗಳೂರು/ಬಳ್ಳಾರಿ, ಜೂ.07:
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿ ನೇಮಕಗೊಂಡ ಬಿ.ಕೆ. ಹರಿಪ್ರಸಾದ್ ಅವರನ್ನು ಬಳ್ಳಾರಿ ನಗರ ಶಾಸಕ ನಾರಾ ಭರತ್ ಅಭಿನಂದಿಸಿ, ಶುಭ ಹಾರೈಸಿದ್ದಾರೆ.
ಈ ಸಂದರ್ಭ ಬಳ್ಳಾರಿ ಜಿಲ್ಲೆಯ ಭವಿಷ್ಯದ ರಾಜಕೀಯ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
ಹೊಸದಾಗಿ ನೇಮಕಗೊಂಡ ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಯಿತು ಮತ್ತು ಅವರ ನಾಯಕತ್ವದಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷವು ಇನ್ನಷ್ಟು ಬಲಪಡುತ್ತದೆ ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ, ವಿಶೇಷವಾಗಿ ಬಳ್ಳಾರಿ ಜಿಲ್ಲೆಯಲ್ಲಿ ಅಭಿವೃದ್ಧಿ ಮತ್ತು ಜನಸೇವೆಯ ಹೊಸ ಅಧ್ಯಾಯ ಆರಂಭವಾಗುತ್ತದೆ ಎಂಬ ವಿಶ್ವಾಸವನ್ನು ಶಾಸಕ ನಾರಾ ಭರತ್ ರೆಡ್ಡಿ ವ್ಯಕ್ತಪಡಿಸಿದ್ದಾರೆ.
ಭೇಟಿ ವೇಳೆ ಬಳ್ಳಾರಿ ಜಿಲ್ಲೆಯ ರಾಜಕೀಯ ಪರಿಸ್ಥಿತಿ, ಪಕ್ಷದ ಸಂಘಟನಾತ್ಮಕ ಬಲವರ್ಧನೆ, ಅಭಿವೃದ್ಧಿ ಯೋಜನೆಗಳು ಮತ್ತು ಭವಿಷ್ಯದ ಕಾರ್ಯಯೋಜನೆಗಳ ಬಗ್ಗೆ ವಿವರವಾದ ಚರ್ಚೆ ನಡೆಯಿತು. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಸಬಲಗೊಳಿಸುವುದು ಮತ್ತು ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವುದು ಈ ಚರ್ಚೆಯ ಮುಖ್ಯ ಅಂಶಗಳಾಗಿದ್ದವು ಎಂದು ಶಾಸಕರು ತಿಳಿಸಿದ್ದಾರೆ.
ಬಿ.ಕೆ. ಹರಿಪ್ರಸಾದ್ ಅವರ ಅನುಭವ ಮತ್ತು ನಾಯಕತ್ವವು ಪಕ್ಷಕ್ಕೆ ಮಾರ್ಗದರ್ಶನವಾಗುತ್ತದೆ ಎಂದು ನನ್ನ ಭಾವನೆ, ಅವರ ಯಶಸ್ವಿ ನಾಯಕತ್ವಕ್ಕೆ ಶುಭಕಾಮನೆ ಸಲ್ಲಿಸಿದೆ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದ್ದಾರೆ.

7th June 2026
ಬಳ್ಳಾರಿ, ಜೂ. 7: ನಗರದ ಡಿ.ಸಿ. ಕ್ಯಾಂಪ್ ರಸ್ತೆಯ ಸಮೀಪ ಹರಿಯುವ ಅಂದ್ರಾಳ್ ಹಳ್ಳದಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿರುವ ಘಟನೆ ಸಾರ್ವಜನಿಕರಲ್ಲಿ ಆತಂಕ ಹಾಗೂ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಭಾನುವಾರ ಬೆಳಿಗ್ಗೆ ಸ್ಥಳೀಯರು ಹಳ್ಳದ ಬಳಿ ತೆರಳಿದ ವೇಳೆ ನೀರಿನಲ್ಲಿ ಮಹಿಳೆಯ ಮೃತದೇಹ ತೇಲುತ್ತಿರುವುದು ಕಂಡುಬಂದಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಳೆದ ರಾತ್ರಿ ಬಳ್ಳಾರಿ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದರಿಂದ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಮಹಿಳೆಯ ಮೃತದೇಹ ಮಳೆ ನೀರಿನೊಂದಿಗೆ ಬೇರೆ ಪ್ರದೇಶದಿಂದ ಕೊಚ್ಚಿಕೊಂಡು ಬಂದಿರಬಹುದೇ ಅಥವಾ ದುಷ್ಕರ್ಮಿಗಳು ಕೊಲೆ ಮಾಡಿ ಹಳ್ಳಕ್ಕೆ ಎಸೆದಿರಬಹುದೇ ಎಂಬ ಅನುಮಾನಗಳು ವ್ಯಕ್ತವಾಗಿವೆ.
ಮೃತ ಮಹಿಳೆಯ ಶವವು ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಪ್ರಕರಣದ ಸುತ್ತ ಮತ್ತಷ್ಟು ಸಂಶಯಗಳನ್ನು ಹುಟ್ಟುಹಾಕಿದೆ. ಇದು ಅಪಘಾತ, ಆತ್ಮಹತ್ಯೆ ಅಥವಾ ಕೊಲೆ ಪ್ರಕರಣವೇ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಮಹಿಳೆಯ ಶವ ಪತ್ತೆಯಾದ ಹಿನ್ನೆಲೆ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪ್ರಕರಣದ ಸಂಪೂರ್ಣ ಸತ್ಯಾಂಶ ಬಹಿರಂಗವಾಗಬೇಕೆಂದು ಒತ್ತಾಯಿಸಿದ್ದಾರೆ.
ಮಾಹಿತಿ ಪಡೆದ ಎ.ಪಿ.ಎಂ.ಸಿ. ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಘಟನಾ ಸ್ಥಳದಲ್ಲಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗುತ್ತಿದ್ದು, ಮಹಿಳೆಯ ಗುರುತು ಹಾಗೂ ಸಾವಿನ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.
ಮರಣೋತ್ತರ ಪರೀಕ್ಷೆಯ ವರದಿ ಹಾಗೂ ತನಿಖೆಯ ಬಳಿಕವೇ ಸಾವಿನ ಹಿಂದಿನ ನಿಜವಾದ ಕಾರಣ ಬಹಿರಂಗವಾಗುವ ಸಾಧ್ಯತೆ ಇದ್ದು, ಸದ್ಯ ಪ್ರಕರಣವನ್ನು ಎ.ಪಿ.ಎಂ.ಸಿ. ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಸ್ಥಳೀಯರ ಗಮನ ಸೆಳೆದಿರುವ ಈ ಘಟನೆ ನಗರದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

6th June 2026
ಬಳ್ಳಾರಿ,ಜೂ.06 : ನಗರದ ಪೋಲಾ ಹೋಟೆಲ್ ಎದುರಿನ ಮೆಸೋನಿಕ್ ಹಾಲ್ಗೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನನ್ನು ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡಿದೆ.
ಈ ಜಾಗದ ಕುರಿತು ಹಲವು ವರ್ಷಗಳಿಂದ ಆಡಳಿತಾತ್ಮಕ ಮತ್ತು ಕಾನೂನು ಪ್ರಕ್ರಿಯೆಗಳು ನಡೆಯುತ್ತಿದ್ದವು. ಸಂಬAಧಪಟ್ಟ ದಾಖಲೆಗಳು ಹಾಗೂ ಆದೇಶಗಳ ಆಧಾರದ ಮೇಲೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜಾಗವನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಂಡರು.
ಜಿಲ್ಲಾಡಳಿತದ ಅಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್ ಭದ್ರತೆಯೊಂದಿಗೆ ಕಾರ್ಯಾಚರಣೆ ನಡೆಸಲಾಯಿತು. ಜಾಗವನ್ನು ವಶಕ್ಕೆ ಪಡೆದ ಬಳಿಕ ಸರ್ಕಾರದ ಸ್ವತ್ತಾಗಿದೆ ಎಂಬ ಫಲಕವನ್ನು ಅಳವಡಿಸಲಾಗಿದೆ.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್ ಅವರು ಮಾತನಾಡಿ, ಬಳ್ಳಾರಿಯ ಟಿ.ಎಸ್ ಸಂಖ್ಯೆ 102 ರಲ್ಲಿರುವ ಒಟ್ಟು 4 ಎಕರೆ 44 ಸೆಂಟ್ಸ್ ವಿಸ್ತೀರ್ಣದ ಜಾಗವನ್ನು ಜಿಲ್ಲಾಧಿಕಾರಿಗಳ ಆದೇಶದನ್ವಯ ಇಂದು ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರದ ಸುಪರ್ದಿಗೆ ಪಡೆದಿದ್ದಾರೆ.
ಈ ಜಮೀನು 1884 ರಿಂದಲೂ ಮೆಸೋನಿಕ್ ಹಾಲ್' ಹೆಸರಿನಲ್ಲಿ ಖಾಸಗಿಯವರ ಬಳಕೆಯಲ್ಲಿ ಇತ್ತು. ಆದರೆ, ಈ ಆಸ್ತಿಗೆ ಸಂಬAಧಿಸಿದAತೆ ನಿಯಮಾನುಸಾರ ಯಾವುದೇ ರೀತಿಯ ಸದುಪಯೋಗ ಅಥವಾ ಅಗತ್ಯ ನವೀಕರಣಗಳು ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಜಾಗವನ್ನು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಇದನ್ನು ಸರ್ಕಾರದ ವಶಕ್ಕೆ ಪಡೆಯುವಂತೆ ಕಂದಾಯ ಇಲಾಖೆಗೆ ಮಹತ್ವದ ಆದೇಶ ಹೊರಡಿಸಿದ್ದರು.
ಜಿಲ್ಲಾಧಿಕಾರಿಗಳ ಖಡಕ್ ಆದೇಶದ ಬೆನ್ನಲ್ಲೇ ಅಧಿಕಾರಿಗಳ ತಂಡ, ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಕಾನೂನಾತ್ಮಕವಾಗಿ ಜಮೀನನ್ನು ಸರ್ಕಾರದ ವಶಕ್ಕೆ ಪಡೆದುಕೊಂಡಿದೆ ಎಂದು ಮಾಹಿತಿ ನೀಡಿದರು.
ಕಾರ್ಯಾಚರಣೆಯಲ್ಲಿ ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ., ಡಿಡಿಎಲ್ಆರ್ ಪ್ರಮೋದ್, ಬಳ್ಳಾರಿ ತಾಲ್ಲೂಕು ತಹಶೀಲ್ದಾರರಾದ ಟಿ.ರೇಖಾ, ಕಂದಾಯ ನಿರೀಕ್ಷಕರು, ಮಹಾನಗರಪಾಲಿಕೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಇತರರು ಹಾಜರಿದ್ದರು.

6th June 2026
ಹೊಳಲ್ಕೆರೆ, ಜೂ. 6: ಘನ ತ್ಯಾಜ್ಯ ವಿಲೇವಾರಿ ಹಾಗೂ ಸ್ವಚ್ಛತಾ ಯಂತ್ರೋಪಕರಣಗಳ ಸಮರ್ಪಕ ನಿರ್ವಹಣೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಹೊಳಲ್ಕೆರೆ ಪುರಸಭೆ ವತಿಯಿಂದ ಪೌರಕಾರ್ಮಿಕರಿಗೆ ಒಂದು ದಿನದ ಅಧ್ಯಯನ ಪ್ರವಾಸವನ್ನು ಆಯೋಜಿಸಲಾಯಿತು.
ರಾಜ್ಯ ಸರ್ಕಾರದ ಸುತ್ತೋಲೆ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶ, ಚಿತ್ರದುರ್ಗದ ಸ್ವಚ್ಛ ಭಾರತ ಅಭಿಯಾನದ ಮಾರ್ಗಸೂಚಿಯಂತೆ ಈ ಅಧ್ಯಯನ ಪ್ರವಾಸ ಹಮ್ಮಿಕೊಳ್ಳಲಾಗಿತ್ತು.
ಪುರಸಭೆಯ ಮುಖ್ಯಾಧಿಕಾರಿ ಉಮೇಶ್ ಅವರ ಮಾರ್ಗದರ್ಶನದ ಮೇರೆಗೆ ಪುರಸಭೆಯ ಆರೋಗ್ಯ ನಿರೀಕ್ಷಕರಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವ ಜವಾಬ್ದಾರಿ ವಹಿಸಲಾಗಿತ್ತು.
ಅಧ್ಯಯನ ಪ್ರವಾಸದ ವೇಳೆ ಪೌರಕಾರ್ಮಿಕರು ಘನ ತ್ಯಾಜ್ಯ ವಿಲೇವಾರಿ ವಿಧಾನಗಳು, ತ್ಯಾಜ್ಯ ವಿಂಗಡಣೆ, ಸ್ವಚ್ಛತಾ ಕಾರ್ಯಗಳಲ್ಲಿ ಬಳಸುವ ಯಂತ್ರೋಪಕರಣಗಳ ನಿರ್ವಹಣೆ ಹಾಗೂ ಸ್ವಚ್ಛತಾ ವ್ಯವಸ್ಥೆಯ ಸುಧಾರಣೆಗೆ ಸಂಬಂಧಿಸಿದ ಅನೇಕ ವಿಷಯಗಳ ಕುರಿತು ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕ ಹರೀಶ್ ಹಾಗೂ ಪುರಸಭೆಯ ಪೌರಕಾರ್ಮಿಕರು ಭಾಗವಹಿಸಿದ್ದರು.
ಅಧ್ಯಯನ ಪ್ರವಾಸದ ಬಳಿಕ ಮಾತನಾಡಿದ ಪೌರಕಾರ್ಮಿಕರು, “ಮುಂದಿನ ದಿನಗಳಲ್ಲಿ ನಮ್ಮ ವಾರ್ಡ್ಗಳು ಹಾಗೂ ಪಟ್ಟಣವನ್ನು ಇನ್ನಷ್ಟು ಸ್ವಚ್ಛವಾಗಿಡಲು ಶ್ರಮಿಸುತ್ತೇವೆ” ಎಂದು ತಿಳಿಸಿದರು.
ವರದಿ: ನಾಗರಾಜ್ ಕೆ.

6th June 2026
ಹೊಳಲ್ಕೆರೆ, ಜೂ. 6: ಪಟ್ಟಣದ ಪುರಸಭೆ ವ್ಯಾಪ್ತಿಯ ಡಿವೈಡರ್ ಪಕ್ಕದಲ್ಲಿ ಅಪಾಯಕಾರಿ ರೀತಿಯಲ್ಲಿ ಗುಂಡಿ ಬಿದ್ದಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಪುರಸಭೆ ಮುಖ್ಯಾಧಿಕಾರಿಗಳ ಗಮನಕ್ಕೆ ತಂದ ತಕ್ಷಣವೇ ಕ್ರಮ ಕೈಗೊಳ್ಳಲಾಯಿತು.
ಪುರಸಭೆ ಮುಖ್ಯಾಧಿಕಾರಿ ಉಮೇಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪೌರಕಾರ್ಮಿಕರನ್ನು ಕರೆದುಕೊಂಡು ಗುಂಡಿಯನ್ನು ತಕ್ಷಣವೇ ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಿದರು. ಹಲವು ದಿನಗಳಿಂದ ಈ ಗುಂಡಿಯಿಂದ ಸಾರ್ವಜನಿಕರಿಗೆ ಸಂಚಾರದಲ್ಲಿ ತೊಂದರೆಯಾಗುತ್ತಿದ್ದು, ಕೆಲವರು ಬಿದ್ದು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಬಗ್ಗೆ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಈ ಕುರಿತು ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಉಮೇಶ್ ಅವರು, “ಸಾರ್ವಜನಿಕರು ಸಮಸ್ಯೆಯನ್ನು ನಮ್ಮ ಗಮನಕ್ಕೆ ತಂದ ಕೂಡಲೇ ಸ್ಥಳ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅಪಘಾತಗಳಿಗೆ ಕಾರಣವಾಗಿದ್ದ ಗುಂಡಿಯನ್ನು ಮುಚ್ಚಲಾಗಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ” ಎಂದು ತಿಳಿಸಿದರು.
ಪುರಸಭೆಯ ತ್ವರಿತ ಕಾರ್ಯಾಚರಣೆಯಿಂದ ಸ್ಥಳೀಯ ನಿವಾಸಿಗಳು ಹಾಗೂ ವಾಹನ ಸವಾರರು ಸಂತಸ ವ್ಯಕ್ತಪಡಿಸಿದ್ದು, ಸಾರ್ವಜನಿಕ ಸುರಕ್ಷತೆಗೆ ಆದ್ಯತೆ ನೀಡಿ ಕೂಡಲೇ ಸ್ಪಂದಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ಪುರಸಭೆಯ ದ್ವಿತೀಯ ದರ್ಜೆ ಸಹಾಯಕ ನೌಷಾದ್, ಪೌರಕಾರ್ಮಿಕರು ಹಾಗೂ ಇತರ ಸಿಬ್ಬಂದಿ ಕಾರ್ಯದಲ್ಲಿ ಭಾಗವಹಿಸಿದ್ದರು.

5th June 2026
ಹೊಳಲ್ಕೆರೆ, ಜೂ. 5: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹೊಳಲ್ಕೆರೆ ಪಟ್ಟಣದ ಪುರಸಭೆ ವತಿಯಿಂದ ನಗರ ದೇವತೆ ಶ್ರೀ ಕುಕಡೇಶ್ವರಿ ಅಮ್ಮನವರ ದೇವಸ್ಥಾನದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪುರಸಭೆ ಮುಖ್ಯಾಧಿಕಾರಿ ಉಮೇಶ್ ಅವರು ಸಸಿ ನೆಟ್ಟು ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಿದರು. ಪರಿಸರ ಸಮತೋಲನ ಕಾಪಾಡಲು ಪ್ರತಿಯೊಬ್ಬರೂ ಗಿಡಮರಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆಯ ಆರೋಗ್ಯ ನಿರೀಕ್ಷಕಿ ಕಲ್ಪನಾ, ಲೆಕ್ಕಾಧಿಕಾರಿ ಮಹೇಶ್, ಸಿಬ್ಬಂದಿಗಳಾದ ನೌಶಾದ್, ಪ್ರಶಾಂತ್, ನಾಗಭೂಷಣ್ ಸೇರಿದಂತೆ ಪುರಸಭೆ ಸಿಬ್ಬಂದಿ, ಪೌರಕಾರ್ಮಿಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಪರಿಸರ ಸಂರಕ್ಷಣೆಯ ಪ್ರತಿಜ್ಞೆ ಸ್ವೀಕರಿಸಿದರು.
ವಿಶ್ವ ಪರಿಸರ ದಿನದ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸಲಾಯಿತು.
– ವರದಿ: ನಾಗರಾಜ್ ಕೆ

5th June 2026
ಹೊಳಲ್ಕೆರೆ, ಜೂ.5: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಗುರುವಾರ ಗಿಡ ನೆಡುವ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ರಕಾಶ್ ಎಸ್. ಸಸಿ ನೆಟ್ಟು, ಪರಿಸರ ಸಂರಕ್ಷಣೆಯ ಪ್ರತಿಜ್ಞಾವಿಧಿಯನ್ನು ಬೋಧಿಸಿ ಮಾತನಾಡಿದರು.
"ಹೆಚ್ಚಿನ ಸಂಖ್ಯೆಯಲ್ಲಿ ಗಿಡಮರಗಳನ್ನು ಬೆಳೆಸೋಣ. ಮನೆಗೊಂದು ಮಗು, ಮಗುವಿಗೊಂದು ನೆರಳು ಎಂಬ ಧ್ಯೇಯದೊಂದಿಗೆ ಪ್ರತಿಯೊಂದು ಮನೆ ಮುಂದೆ ಕನಿಷ್ಠ ಒಂದು ಗಿಡವನ್ನು ನೆಟ್ಟು ಬೆಳೆಸಬೇಕು. ಪರಿಸರವನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ" ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಯೋಜನಾಧಿಕಾರಿ ಸುರೇಶ್, ಪ್ರಥಮ ದರ್ಜೆ ಸಹಾಯಕ ತಿಮ್ಮಪ್ಪ, ಸಿಬ್ಬಂದಿಗಳಾದ ವಿನಯ್ ಕುಮಾರ್, ವಸತಿ ನೋಡಲ್ ಅಧಿಕಾರಿ ಪ್ರವೀಣ್ ಕುಮಾರ್, ಅರುಣ್ ಕುಮಾರ್ ನಾಯಕ್, ಗಿರಿಧರ್ ಸೇರಿದಂತೆ ತಾಲೂಕು ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪರಿಸರ ಸಂರಕ್ಷಣೆ ಮತ್ತು ಹಸಿರು ವಾತಾವರಣ ನಿರ್ಮಾಣದ ಮಹತ್ವವನ್ನು ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

4th June 2026
ಬಳ್ಳಾರಿ: ಇಲ್ಲಿನ ಬಳ್ಳಾರಿ ಧರ್ಮಕ್ಷೇತ್ರದ ಹಿರಿಯ ಧರ್ಮಗುರುಗಳಾದ ಪೂಜ್ಯ ಫಾದರ್ ಆರ್ಚಿಬಾಲ್ಡ್ ಕೊರಿಯ (ಆರ್ಚಿ ಫಾದರ್) ಅವರ ನಿಧನರಾಗಿದ್ದಾರೆ. ೮೬ ವರ್ಷ ವಯಸ್ಸಿನ ಪೂಜ್ಯರು ವಯೋಸಹಜ ಅನಾರೋಗ್ಯದಿಂದ ೨೦೨೬ರ ಜೂನ್ ೩ರಂದು ಬುಧವಾರ ತಡರಾತ್ರಿ ಭಗವಂತನಲ್ಲಿ ಲೀನರಾಗಿದ್ದಾರೆ.
ತಮ್ಮ ಸರಳ ಜೀವನ, ನಿಸ್ವಾರ್ಥ ಸೇವಾಭಾವ, ಅಚಲ ನಂಬಿಕೆ ಹಾಗೂ ಆಧ್ಯಾತ್ಮಿಕ ನಾಯಕತ್ವದ ಮೂಲಕ ಅವರು ಸಾವಿರಾರು ಭಕ್ತರ ಹೃದಯಗಳಲ್ಲಿ ಶಾಶ್ವತ ಸ್ಥಾನ ಪಡೆದಿದ್ದರು. ಅವರ ಅಗಲಿಕೆ ಬಳ್ಳಾರಿ ಧರ್ಮಕ್ಷೇತ್ರಕ್ಕೆ ಹಾಗೂ ಸಮಸ್ತ ಕ್ರೈಸ್ತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಪೂಜ್ಯರ ಪಾರ್ಥಿವ ಶರೀರವನ್ನು ೨೦೨೬ರ ಜೂನ್ ೬ರಂದು ಶನಿವಾರ ಬೆಳಿಗ್ಗೆ ೬.೦೦ ಗಂಟೆಗೆ `ಬೆಥನಿ' ಗುರುಗಳ ವಿಶ್ರಾಂತ ನಿಲಯದಲ್ಲಿ ಹಾಗೂ ಬೆಳಿಗ್ಗೆ ೮.೦೦ ಗಂಟೆಯಿAದ ಸಂತ ಅಂತೋನಿಯವರ ಪ್ರಧಾನ ದೇವಾಲಯ, ಕೌಲ್ ಬಜಾರ್, ಬಳ್ಳಾರಿಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇರಿಸಲಾಗುವುದು.
ಅವರ ಅಂತಿಮ ಸಂಸ್ಕಾರ ಮತ್ತು ಶ್ರದ್ಧಾಂಜಲಿ ವಿಧಿಗಳು ಅದೇ ದಿನ ಬೆಳಿಗ್ಗೆ ೧೦.೦೦ ಗಂಟೆಗೆ ಸಂತ ಅಂತೋನಿಯವರ ಪ್ರಧಾನ ದೇವಾಲಯದಲ್ಲಿ ನಡೆಯಲಿದ್ದು, ಬಳಿಕ ಕೌಲ್ ಬಜಾರ್ ಕ್ರೈಸ್ತರ ಸಮಾಧಿಯಲ್ಲಿ ಭೂಸಮಾಧಿ ಮಾಡಲಾಗುವುದು.
ಧರ್ಮಗುರುಗಳು, ಧಾರ್ಮಿಕ ಸಂಸ್ಥೆಗಳ ಸದಸ್ಯರು, ಭಕ್ತರು ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಮತ್ತು ಅಂತಿಮ ಸಂಸ್ಕಾರದ ವಿಧಿಗಳಲ್ಲಿ ಭಾಗವಹಿಸಿ ಪೂಜ್ಯರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸುವಂತೆ ಬಳ್ಳಾರಿ ಧರ್ಮಕ್ಷೇತ್ರದ ಗುರುಶ್ರೇಷ್ಠರಾದ ಫಾದರ್ ಓ.ವಿನ್ಸೆಂಟ್ ಅವರು ವಿನಂತಿಸಿದ್ದಾರೆ.

4th June 2026
ಬಳ್ಳಾರಿ : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಬಳ್ಳಾರಿ ಜಿಲ್ಲಾದ್ಯಂತ 2026ರ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹೇಳಿದರು.
ನಗರದ ನೂತನ ಜಿಲ್ಲಾಡಳಿತ ಭವನದ ವಿಸಿ ಹಾಲ್ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಅರ್ಹ ನಾಗರಿಕನೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಎಷ್ಟು ಮುಖ್ಯವೋ, ಅಷ್ಟೇ ಜವಾಬ್ದಾರಿಯುತವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ಅಗತ್ಯವಾಗಿದೆ.
ಅರ್ಹ ಮತದಾರರು ಯಾರೂ ಪಟ್ಟಿಯಿಂದ ಹೊರಗುಳಿಯದಂತೆ ಮತ್ತು ದೋಷರಹಿತ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಉದ್ದೇಶದಿಂದ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.
*ಮನೆ ಮನೆಗೆ ಖುದ್ದಾಗಿ ಬಿಎಲ್ಒ ಭೇಟಿ: ವಿಶಿಷ್ಟ ಪ್ರಕ್ರಿಯೆ*
ಜಿಲ್ಲೆಯಲ್ಲಿ 2026ರ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆಯ ಅಂಗವಾಗಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಪ್ರತಿಯೊಬ್ಬ ಮತದಾರರ ಮನೆ ಮನೆಗೂ ಕಡ್ಡಾಯವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಪ್ರತಿ ವರ್ಷ ಜನವರಿ 1ರಂದು ಮತದಾರರ ಪಟ್ಟಿಯನ್ನು ಪ್ರಕಟಿಸುತ್ತೇವೆ. ತದನಂತರ ಹೆಸರು ಸೇರ್ಪಡೆ (ನಮೂನೆ 6), ಕೈಬಿಡುವುದು (ನಮೂನೆ 7), ಸ್ಥಳಾಂತರ (ನಮೂನೆ 8) ಮತ್ತು ತಿದ್ದುಪಡಿ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತವೆ.
ಇದು ಸಾಮಾನ್ಯವಾಗಿದ್ದು, ಪ್ರಸಕ್ತ ನಡೆಯುತ್ತಿರುವ ‘ವಿಶೇಷ ಸಮಗ್ರ ಪರಿಷ್ಕರಣೆ' (ಫೇಸ್-3) ಇದಕ್ಕಿಂತ ಸಂಪೂರ್ಣ ಭಿನ್ನವಾಗಿದೆ ಎಂದು ತಿಳಿಸಿದರು.
ಸಾಮಾನ್ಯ ಪರಿಷ್ಕರಣೆಯಲ್ಲಿ ಮನೆ ಮನೆಗೆ ಹೋಗುವುದಿಲ್ಲ.
ಈ ವಿಶೇಷ ಅಭಿಯಾನದಲ್ಲಿ ನಮ್ಮ ಬೂತ್ ಮಟ್ಟದ ಅಧಿಕಾರಿಗಳು 1/1/2025ರ ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬ ಮತದಾರರ ಮನೆಗೂ ಖುದ್ದಾಗಿ ಭೇಟಿ ನೀಡಿ, ವಿವರಗಳನ್ನು ಪರಿಶೀಲಿಸಿ ದೃಢೀಕರಿಸಲಿದ್ದಾರೆ ಎಂದು ವಿವರಿಸಿದರು.
ಜೂನ್ 30 ರಿಂದ ಜುಲೈ 21ರ ವರೆಗೆ ಬಿಎಲ್ಒಗಳು ಪ್ರತೀ ಮನೆ ಮನೆಗೆ ಭೇಟಿ ನೀಡಲಿದ್ದಾರೆ.
ಭೇಟಿಯ ಸಂದರ್ಭದಲ್ಲಿ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ನೀಡಿರುವ ಎರಡು ಪುಟಗಳ ‘ಎನ್ಯುಮರೇಷನ್ ಫಾರ್ಮ್’ (ನೋಂದಣಿ ನಮೂನೆ) ಅನ್ನು ಪ್ರತಿಯೊಬ್ಬ ಮತದಾರರಿಗೂ ತಲುಪಿಸಲಾಗುತ್ತದೆ. ಈ ಬಾರಿ ಇಂಗ್ಲೀಷ್ ಜೊತೆಗೆ ಕನ್ನಡದಲ್ಲೂ ಈ ಫಾರ್ಮ್ ಲಭ್ಯವಿರಲಿದೆ.
ಮತದಾರರಿಂದ ಈ ಎರಡು ಫಾರ್ಮ್ಗಳನ್ನು ಭರ್ತಿ ಮಾಡಿಸಿಕೊಂಡು, ಅದರಲ್ಲಿ ಒಂದನ್ನು ಬಿಎಲ್ಒ ವಾಪಸ್ ಪಡೆದರೆ, ಮತ್ತೊಂದಕ್ಕೆ ಸ್ವೀಕೃತಿ ಸಹಿ ಹಾಕಿ ಮತದಾರರ ಕೈಗೆ ನೀಡಲಿದ್ದಾರೆ. ಹೆಸರು ಬಿಟ್ಟು ಹೋಗಿರುವ ಅಥವಾ ತಪ್ಪುಗಳಾಗಿರುವ ಕುರಿತು ಮತದಾರರು ಆಕ್ಷೇಪಣೆ ಅವಧಿಯಲ್ಲಿ ಈ ಸ್ವೀಕೃತಿ ಪತ್ರದೊಂದಿಗೆ ಕ್ಲೆöÊಮ್ ಮಾಡಬಹುದಾಗಿದೆ.
ಬಿಎಲ್ಒ ಆಪ್ ಮೂಲಕ ಇಆರ್ಒ (ಮತದಾರರ ನೋಂದಣಾಧಿಕಾರಿ) ಅವರಿಗೆ ವಿವರಗಳನ್ನು ಸಲ್ಲಿಸುವ ಸಂಪೂರ್ಣ ಜವಾಬ್ದಾರಿಯನ್ನು ಬಿಎಲ್ಒಗಳಿಗೆ ವಹಿಸಲಾಗಿದೆ ಎಂದರು.
ಚುನಾವಣಾ ಆಯೋಗವು ಪ್ರಜಾ ಪ್ರಾತಿನಿಧ್ಯ ಕಾಯ್ದೆ (ಆರ್.ಪಿ.ಆಕ್ಟ್) ಸೆಕ್ಷನ್ 21ರಡಿ ಈ ವಿಶೇಷ ಪರಿಷ್ಕರಣೆಗೆ ಚಾಲನೆ ನೀಡಿದ್ದು, ಕರ್ನಾಟಕದಲ್ಲಿ ಸದ್ಯ 3ನೇ ಹಂತದ ಪ್ರಕ್ರಿಯೆ ಚಾಲ್ತಿಯಲ್ಲಿದೆ.
ಈ ಬಾರಿಯ ಪರಿಷ್ಕರಣೆಗೆ 1/10/2026 ಅನ್ನು ಅರ್ಹತಾ ದಿನಾಂಕವಾಗಿ ನಿಗದಿಪಡಿಸಲಾಗಿದೆ. ಅಂದರೆ, ಈ ದಿನಾಂಕಕ್ಕೆ 18 ವರ್ಷ ತುಂಬುವ ಪ್ರತಿಯೊಬ್ಬ ನಾಗರಿಕನೂ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅರ್ಹನಾಗಿರುತ್ತಾನೆ ಎಂದರು.
*ಪರಿಷ್ಕರಣೆ ವೇಳಾಪಟ್ಟಿ*
ಅಧಿಕಾರಿಗಳ ಅಂತಿಮ ಹಂತದ ತರಬೇತಿ ಮುಕ್ತಾಯ: ಜೂನ್ 20, 2026 ರಿಂದ ಜೂನ್ 29, 2026.
ಬಿಎಲ್ಒಗಳ ಮನೆ ಮನೆ ಭೇಟಿ ಮತ್ತು ಸಮೀಕ್ಷೆ: ಜೂನ್ 30, 2026 ರಿಂದ ಜುಲೈ 21, 2026.
ಹೆಚ್ಚುವರಿ ಮತಗಟ್ಟೆಗಳ ಮರುಹಂಚಿಕೆ): ಜುಲೈ 29, 2026.
ಪರಿಷ್ಕೃತ ಕರಡು ಮತದಾರರ ಪಟ್ಟಿ ಪ್ರಕಟಣೆ: ಆಗಸ್ಟ್ 5, 2026.
ಹಕ್ಕುಗಳು ಮತ್ತು ಆಕ್ಷೇಪಣೆಗಳ ಸಲ್ಲಿಕೆ ಅವಧಿ: ಆಗಸ್ಟ್ 5, 2026 ರಿಂದ ಸೆಪ್ಟೆಂಬರ್ 4, 2026.
ನೋಟಿಸ್ ಅವಧಿ ಮತ್ತು ಇತ್ಯರ್ಥ: ಆಗಸ್ಟ್ 5, 2026 ರಿಂದ ಅಕ್ಟೋಬರ್ 3, 2026.
ಅಂತಿಮ ಮತದಾರರ ಪಟ್ಟಿ ಅಧಿಕೃತ ಪ್ರಕಟಣೆ: ಅಕ್ಟೋಬರ್ 7, 2026 |
*ದಾಖಲೆಯ ಶೇ 97.68 ರಷ್ಟು ಮ್ಯಾಪಿಂಗ್ ಯಶಸ್ವಿ:*
ಈ ಬಾರಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ವ್ಯವಸ್ಥಿತ ಮ್ಯಾಪಿಂಗ್ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ ದಾಖಲೆಯ ಯಶಸ್ಸು ಸಿಕ್ಕಿದೆ.
ಕಳೆದ 2002ರ ಮತದಾರರ ಪಟ್ಟಿಯನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ ಮ್ಯಾಪಿಂಗ್ ಮಾಡುವ ಮಹತ್ವದ ಕಾರ್ಯವನ್ನು ಚುನಾವಣಾ ವಿಭಾಗ ಹಮ್ಮಿಕೊಂಡಿತ್ತು.
ಈ ಪ್ರಕ್ರಿಯೆಯಡಿ ಜಿಲ್ಲೆಯ 2025ರ ಪಟ್ಟಿಯ ಅನ್ವಯ ಇರುವ ಒಟ್ಟು 12,28,958 ಮತದಾರರ ಪೈಕಿ ಬರೋಬ್ಬರಿ 12,00,463 (ಶೇ 97.68 ರಷ್ಟು) ಜನರನ್ನು ಯಶಸ್ವಿಯಾಗಿ ಪತ್ತೆ ಹಚ್ಚಿ, ಅವರ ಕುಟುಂಬದವರೊಂದಿಗೆ ಕೊಂಡಿ ಕಲ್ಪಿಸುವ ಕೆಲಸ ಯಶಸ್ವಿಯಾಗಿದೆ.
ಇನ್ನೂ ಮ್ಯಾಪ್ ಆಗದೇ ಉಳಿದಿರುವ 28,495 ಮತದಾರರನ್ನು ಪತ್ತೆ ಹಚ್ಚಲು ಮುಂದಿನ ದಿನಗಳಲ್ಲಿ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗುವುದು ಎಂದರು.
*ದಾಖಲೆ ಪತ್ರಗಳ ಕಡ್ಡಾಯವಿಲ್ಲ: ಸರಳ ಪ್ರಕ್ರಿಯೆ*
ಬಿಎಲ್ಒಗಳು ಸಾರ್ವಜನಿಕರಿಂದ ಭರ್ತಿ ಮಾಡಿದ ಫಾರ್ಮ್ಗಳನ್ನು ಸಂಗ್ರಹಿಸುವಾಗ ಯಾವುದೇ ರೀತಿಯ ಪೂರಕ ದಾಖಲಾತಿಗಳನ್ನು ಕೇಳುವುದಿಲ್ಲ. ಮತದಾರರು ನೀಡುವ ಅರ್ಜಿ ಅಪೂರ್ಣವಾಗಿದ್ದರೂ ಸಹ, ಬಿಎಲ್ಒಗಳೇ ಅದಕ್ಕೆ ಅಗತ್ಯವಿರುವ ಸಹಾಯವನ್ನು ಸ್ಥಳದಲ್ಲೇ ಮಾಡಲಿದ್ದಾರೆ.
ಅರ್ಜಿದಾರರ ಹೆಸರು ಮತ್ತು ಸಹಿ ಇದ್ದರೆ ಸಾಕು, ಅದನ್ನು ಸ್ವೀಕರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಒಂದು ವೇಳೆ ಸಲ್ಲಿಕೆಯಾಗುವ ಅರ್ಜಿಗಳು ಅಪೂರ್ಣವಾಗಿದ್ದಲ್ಲಿ, ಅಂತಹ ಸಾರ್ವಜನಿಕರಿಗೆ ಇಆರ್ಒ ವತಿಯಿಂದ ನೋಟಿಸ್ ಜಾರಿ ಮಾಡಲಾಗುತ್ತದೆ.
ಅಪೂರ್ಣ ಮಾಹಿತಿ ಇರುವವರು ಸೂಕ್ತ ದಾಖಲೆಗಳೊಂದಿಗೆ ಪೂರ್ಣ ಮಾಹಿತಿ ನೀಡಿದ ಬಳಿಕವಷ್ಟೇ ಆಕ್ಷೇಪಣೆ ಹಾಗೂ ಹಕ್ಕುಗಳ ಪ್ರಕ್ರಿಯೆಯಡಿ ಅದನ್ನು ಇತ್ಯರ್ಥಪಡಿಸಲಾಗುವುದು. ಬಿಎಲ್ಒ ಭೇಟಿ ನೀಡಿದಾಗ ಸಾರ್ವಜನಿಕರ ಮನೆ ಬೀಗ ಹಾಕಿದ್ದರೆ, ಅಧಿಕಾರಿಗಳು ಸಮಾನ ಕಾಲಾವಧಿಯ ಅಂತರದಲ್ಲಿ ಕನಿಷ್ಠ 3 ಬಾರಿ ಆ ಮನೆಗೆ ಕಡ್ಡಾಯವಾಗಿ ಭೇಟಿ ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
*ಹೆಚ್ಚುವರಿ ಮತಗಟ್ಟೆಗಳ ಸ್ಥಾಪನೆ:*
ಯಾವುದಾದರೂ ಒಂದು ಮತದಾನದ ಭಾಗದಲ್ಲಿ ಮತದಾರರ ಸಂಖ್ಯೆ 1,200 ಕ್ಕಿಂತ ಹೆಚ್ಚಾದರೆ, ಅಲ್ಲಿ ಮತದಾನ ಸುಲಭಗೊಳಿಸಲು ಹೆಚ್ಚುವರಿಯಾಗಿ ಒಂದು 'ಆಕ್ಸಿಲರಿ ಪೋಲಿಂಗ್ ಸ್ಟೇಷನ್' ಸ್ಥಾಪಿಸಲಾಗುವುದು.
ಈ ಮತಗಟ್ಟೆಗಳ ಮರುಹಂಚಿಕೆ ಅಥವಾ ರ್ಯಾಷನಲೈಜೇಶನ್ ಪ್ರಕ್ರಿಯೆಯನ್ನು ಜುಲೈ 29 ರ ಒಳಗಾಗಿ ಪೂರ್ಣಗೊಳಿಸಲಾಗುವುದು ಎಂದರು.
ಚುನಾವಣಾ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳುವುದು ಮುಖ್ಯ ಉದ್ದೇಶ.
ಈ ನಿಟ್ಟಿನಲ್ಲಿ ಪ್ರಮುಖ ರಾಜಕೀಯ ಪಕ್ಷಗಳು, ಅವರು ನೇಮಿಸುವ ಬೂತ್ ಮಟ್ಟದ ಏಜೆಂಟರು ಹಾಗೂ ಮಾಧ್ಯಮಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಪ್ರಕ್ರಿಯೆಯ ಪ್ರತಿಯೊಂದು ಹಂತದ ಬಗ್ಗೆಯೂ ವಿಸ್ತೃತ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಮತದಾರರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಪಂಚಾಯತ್ ಸಿಇಒ ನೇತೃತ್ವದಲ್ಲಿ ವ್ಯಾಪಕ ಸ್ವೀಪ್ ಕಾರ್ಯಕ್ರಮ ಪ್ರಚಾರ ಹಮ್ಮಿಕೊಳ್ಳಲಾಗುವುದು.
ಕರಡು ಪಟ್ಟಿ ಪ್ರಕಟವಾದ ನಂತರ ಪಟ್ಟಿಯನ್ನು ಗ್ರಾಮ ಪಂಚಾಯತಿ ಕಚೇರಿಗಳು, ತಾಲೂಕು ಪಂಚೇತಿ ಇಒ ಕಚೇರಿ ಹಾಗೂ ಸ್ಥಳೀಯ ನಗರಾಡಳಿತ ಸಂಸ್ಥೆಗಳ ಮುಖ್ಯಸ್ಥರ ಕಚೇರಿಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಚುರಪಡಿಸಲಾಗುವುದು ಎಂದರು.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ, ವಿವಿಧ ನಮೂನೆಗಳು ಮತ್ತು ವೇಳಾಪಟ್ಟಿಯ ಹೆಚ್ಚಿನ ವಿವರಗಳಿಗಾಗಿ ಸಾರ್ವಜನಿಕರು ಬಳ್ಳಾರಿ ಜಿಲ್ಲೆಯ ಅಧಿಕೃತ ವೆಬ್ಸೈಟ್ https://ballari.nic.in/ ಅಥವಾ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ವೆಬ್ಸೈಟ್ https://ceo.karnataka.gov.in/en ಗೆ ಭೇಟಿ ನೀಡಬಹುದಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್, ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ., ಜಿಪಂ ಉಪಕಾರ್ಯದರ್ಶಿ ಶಶಿಕಾಂತ್ ಶಿವಪೂರೆ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚಿದಾನಂದಪ್ಪ, ಆಹಾರ ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಕೆ.ಆರ್.ದೇವರಾಜ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಂ.ಸೋಮಸುAದರ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.