
13th September 2025
ಬಳ್ಳಾರಿ : ಸರ್ಕಾರದ ಇಂದಿನ ಪರಿಸ್ಥಿತಿಯನ್ನು ಗಮನಿಸಿದಲ್ಲಿ ಸಿದ್ದರಾಮಯ್ಯನವರು 17ನೇ ಬಜೆಟ್ ಮಂಡಿಸುವುದು ಅನುಮಾನವಿದೆ ಎಂದು ಮಾಜಿ ಸಚಿವ ಬಿ ಶ್ರೀರಾಮುಲು ಅನುಮಾನವನ್ನು ವ್ಯಕ್ತಪಡಿಸಿದರು.
ಅವರು ಇಂದು ನಗರದ ಸಿರುಗುಪ್ಪ ರಸ್ತೆಯ ಹವಾಂ ಭಾವಿಯ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಆರ್ಥಿಕವಾಗಿ ದಿವಾಳಿಯಾಗಿದೆ, ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಜಾತಿ ಜನಗಣತಿಯನ್ನು ನಡೆಸಿ ಸರ್ಕಾರಕ್ಕೆ ಹೊರೆಯಾಗಿರುವ 16 ಲಕ್ಷ ಬಿಪಿಎಲ್ ಕಾರ್ಡ್ ರದ್ದುಪಡಿಸುವುದು ಮತ್ತು ಉಳ್ಳವರ ಕುಟುಂಬಗಳನ್ನು ಗ್ಯಾರಂಟಿ ಯೋಜನೆಗಳಿಂದ ಹೊರಗಿಡುವ ಹುನ್ನಾರ ನಡೆಯುತ್ತಿದೆ ಎಂದರು.
ಸರ್ಕಾರ ಪದೇ ಪದೇ ಜಾತಿ ಜನಗಣತಿಗಾಗಿ ಹಣವನ್ನು ಪೋಲು ಮಾಡುತ್ತಿದೆ, ಸತತ 10 ವರ್ಷಗಳ ಕಾಂತರಾಜ್ ವರದಿಯನ್ನು ತಯಾರಿಸಲು 165 ಕೋಟಿ ರೂಪಾಯಿ ಖರ್ಚು ಮಾಡಿದೆ ಮತ್ತು ಸದಾಶಿವ ಆಯೋಗ ವರದಿಯಂತೆ ಜಾತಿ ಜನಗಣತಿಯನ್ನು ನಡೆಸಲು ಈಗ 420 ಕೋಟಿ ರೂಪಾಯಿಗಳನ್ನು ಬಜೆಟ್ ನಲ್ಲಿ ತೆಗೆದಿರಿಸಲಾಗಿದೆ ಇದು ರಾಜ್ಯ ಹಣಕಾಸು ಇಲಾಖೆ ಬಾರಿ ಹೊರೆಯಾಗಲಿದೆ ಇದು ಕಾಂಗ್ರೆಸ್ ಸರ್ಕಾರದ ಹಣ ಲಪಟಾಯಿಸುವ ದುರುದ್ದೇಶವಾಗಿದೆ ಎಂದು ಸರ್ಕಾರದ ಕ್ರಮವನ್ನು ಟೀಕಿಸಿದರು. ಅಷ್ಟೇ ಅಲ್ಲದೆ 1.75 ಲಕ್ಷ ಜನ ಈ ಗಣತಿಯಲ್ಲಿ ಪಾಲ್ಗೊಳ್ಳಲಿದ್ದು ಶಿಕ್ಷಕರು ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತರು ತಮ್ಮ ಕೆಲಸದ ಹೊರೆ ಮಧ್ಯೆಯು ಈ ಸಮೀಕ್ಷೆಗೆ ಬಳಸಿಕೊಳ್ಳುತ್ತಿದ್ದಾರೆ ಇದಕ್ಕಾಗಿ 325 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ 120 ರಿಂದ 150 ಕೋಟಿ ರೂಪಾಯಿಗಳನ್ನು ಲಪಟಾಯಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಆರೋಪಿಸಿದರು. ಇದಕ್ಕೆ ಸಿದ್ದರಾಮಯ್ಯನವರು ತಮ್ಮ ಆಪ್ತರಾದ ಮಧುಸೂದನ್ ನಾಯಕ್ ಅವರನ್ನು ಸಮಿತಿಯ ಉಸ್ತುವಾರಿಯನ್ನಾಗಿ ನೇಮಕ ಮಾಡಿಕೊಂಡಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಈ ಪತ್ರಿಕಾಗೋಷ್ಠಿಯಲ್ಲಿ, ಹೋಬಳೇಶ್, ಮಹಾನಗರ ಪಾಲಿಕೆ ಸದಸ್ಯರಾದ ಕೆ ಹನುಮಂತಪ್ಪ ಗುಡಿಗಂಟಿ ಹನುಮಂತಪ್ಪ ಮೋತ್ಕರ್ ಶ್ರೀನಿವಾಸ್, ಮುಖಂಡರಾದ ತಿಮ್ಮಪ್ಪ ವೆಂಕಟರಾಮರೆಡ್ಡಿ ಸೇರಿದಂತೆ ಇತರರಿದ್ದರು
11th September 2025
ಬಳ್ಳಾರಿ : ಬಳ್ಳಾರಿ ನಗರದ ಮುಂಡ್ರಿಗಿ ಬಳಿಯ ಬಹು ನಿರೀಕ್ಷಿತ ರಾಜೀವ್ ಗಾಂಧಿ ಟೌನ್'ಶಿಪ್ ಯೋಜನೆ ಅಡಿ ಈಗಾಗಲೇ ಪೂರ್ಣಗೊಳ್ಳಲಿರುವ 1000 ಮನೆಗಳನ್ನು ಫಲಾನುಭವಿಗಳಿಗೆ ಶೀಘ್ರದಲ್ಲೇ ವಿತರಣೆ ಮಾಡಲಾಗುವುದು ಎಂದು ಶಾಸಕ ನಾರಾ ಭರತ್ ತಿಳಿಸಿದ್ದಾರೆ.
ಗುರುವಾರ ಈ ಕುರಿತು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಗುರುವಾರ ಬೆಳಿಗ್ಗೆ ಬಳ್ಳಾರಿ ಹೊರ ವಲಯದ ಮುಂಡ್ರಿಗಿ ಗ್ರಾಮದ ಬಳಿಯ ವಸತಿ ಸಮುಚ್ಛಯಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ತದನಂತರ ಪೂರ್ಣಗೊಂಡಿರುವ ಮನೆಗಳ ವ್ಯವಸ್ಥೆಯನ್ನು ಪರಿಶೀಲಿಸಿದರು.
ಈ ಸಂದರ್ಭ ಮಹಾನಗರ ಪಾಲಿಕೆಯ ಆಯುಕ್ತ ಮಂಜುನಾಥ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದು ಮನೆಗಳ ನಿರ್ಮಾಣ, ಹಂಚಿಕೆ ಕುರಿತು ಶಾಸಕರಿಗೆ ಮಾಹಿತಿ ನೀಡಿದರು.
ಮನೆ ಪಡೆಯಲು ಈಗಾಗಲೇ ಹಲವು ಫಲಾನುಭವಿಗಳು ಸರ್ಕಾರ ನಿಗದಿ ಮಾಡಿರುವ ಹಣವನ್ನು ಸಂದಾಯ ಮಾಡಿದ್ದಾರೆ, ಆದರೆ ಮನೆಗಳನ್ನು ಉಚಿತವಾಗಿ ನೀಡಲು ಈಗಾಗಲೇ ವಸತಿ ಸಚಿವ ಜಮೀರ್ ಅಹ್ಮದ್ ಅವರೊಂದಿಗೆ ಚರ್ಚಿಸಲಾಗಿದ್ದು, ಸರ್ಕಾರವೇ ಫಲಾನುಭವಿಗಳ ಹಣವನ್ನು ಕಟ್ಟಿ, ಶೇ.100ರಷ್ಟು ಉಚಿತವಾಗಿ ಮನೆ ಹಂಚುವ ಉದ್ಧೇಶ ಇದೆ ಎಂದರು.
ಅಪೂರ್ಣ ಇರುವ ಮನೆಗಳ ನಿರ್ಮಾಣ ಪೂರ್ಣಗೊಳಿಸಿ ಪ್ರಾಥಮಿಕ ಹಂತದಲ್ಲಿ 1000 ಮನೆಗಳನ್ನು ಏಕ ಕಾಲಕ್ಕೆ ಹಂಚಿಕೆ ಮಾಡುವ ಯೋಚನೆ ಇದೆ ಎಂದು ತಿಳಿಸಿದ ಶಾಸಕ ನಾರಾ ಭರತ್ ರೆಡ್ಡಿ, ಸಿಎಂ ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ ಅವರ ಸಾರಥ್ಯದಲ್ಲಿ ಮನೆ ವಿತರಣೆ ಕಾರ್ಯಕ್ರಮಕ್ಕೆ ದಿನಾಂಕ ನಿಗದಿ ಮಾಡಲಾಗುವುದು ಎಂದರು.
ಈ ಸಂದರ್ಭ ಮುಖಂಡ ಚಾನಾಳ್ ಶೇಖರ್ ಮತ್ತಿತರರು ಹಾಜರಿದ್ದರು.