

15th May 2026

ಬಳ್ಳಾರಿ, ಮೇ 15: ಜಿಲ್ಲೆಯ ಪ್ರಸ್ತಾವಿತ ಜೀನ್ಸ್ ಪಾರ್ಕ್ ನಿರ್ಮಾಣಕ್ಕಾಗಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರೈತರಿಗೆ ಅನ್ಯಾಯವಾಗುತ್ತಿದ್ದು, ಒತ್ತಡ ಹಾಗೂ ಬೆದರಿಕೆ ಮೂಲಕ ಭೂಮಿ ಪಡೆದುಕೊಳ್ಳಲು ಯತ್ನಿಸಲಾಗುತ್ತಿದೆ ಎಂದು ಸಂಜೀವರಾಯನಕೋಟೆ ಗ್ರಾಮದ ರೈತ ಹಾಗೂ ಸಾಮಾಜಿಕ ಹೋರಾಟಗಾರ ಹೊನ್ನುರಸ್ವಾಮಿ ಕೆ.ಟಿ. ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಿಂಚೇರಿ, ಸಂಜೀವರಾಯನಕೋಟೆ, ಮುಂಡ್ರಗಿ, ಹಲಕುಂದಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಕೈಗಾರಿಕೆ ನಿರ್ಮಾಣಕ್ಕೆ ರೈತರು ವಿರೋಧಿಗಳಲ್ಲ. ಆದರೆ ನ್ಯಾಯಯುತ ಪರಿಹಾರ ನೀಡದೆ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ಒತ್ತಡ ಹೇರುತ್ತಿದ್ದಾರೆ ಎಂದು ದೂರಿದ್ದಾರೆ.
ಕುಡತಿನಿ ಭಾಗದಲ್ಲಿ ಭೂಸ್ವಾಧೀನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಪ್ರತಿ ಎಕರೆಗೆ ಸುಮಾರು ₹1 ಕೋಟಿ 1 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿರುವುದಾಗಿ ತಿಳಿಸಿರುವ ಅವರು, ಅದೇ ರೀತಿಯಲ್ಲಿ ಈ ಭಾಗದ ರೈತರಿಗೆ ಸಹ ಸಮಾನ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕೆಲ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ಸೇರಿ ಪ್ರತಿ ಎಕರೆಗೆ ಕೇವಲ ₹62ರಿಂದ ₹65 ಲಕ್ಷವರೆಗೆ ಮಾತ್ರ ನೀಡಲಾಗುತ್ತದೆ ಎಂದು ಹೇಳುತ್ತಿದ್ದು, ಅದರಲ್ಲಿ ಕೂಡ ₹2ರಿಂದ ₹5 ಲಕ್ಷವರೆಗೆ ಕಮಿಷನ್ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬರುತ್ತಿವೆ ಎಂದು ತಿಳಿಸಿದ್ದಾರೆ.
“ಈಗ ಒಪ್ಪದಿದ್ದರೆ ಸರ್ಕಾರ ಕಡಿಮೆ ದರಕ್ಕೆ ಭೂಮಿ ಪಡೆದುಕೊಳ್ಳುತ್ತದೆ. ನಂತರ ಏನೂ ಮಾಡಲು ಸಾಧ್ಯವಿಲ್ಲ” ಎಂದು ರೈತರಿಗೆ ಬೆದರಿಕೆ ಹಾಕಲಾಗುತ್ತಿದೆ. ಇದರಿಂದ ರೈತರು ಆತಂಕಕ್ಕೊಳಗಾಗಿದ್ದು, ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜಿಲ್ಲಾ ಉಸ್ತುವಾರಿ ಮಂತ್ರಿ ಜಮೀರ್ ಅಹ್ಮದ್ ಅವರು, ನಗರ ಶಾಸಕ ಭರತ್ ರೆಡ್ಡಿಯವರು ಹಾಗೂ ತನ್ನ ಕ್ಷೇತ್ರದ ಜನತೆಗೆ ನ್ಯಾಯ ಕೊಡಿಸಲು ಗ್ರಾಮಿಣ ಶಾಸಕ ನಾಗೇಂದ್ರ ಅವರು ಮಧ್ಯಪ್ರವೇಶಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕು. ರೈತರಿಗೆ ಯಾವುದೇ ರೀತಿಯ ಒತ್ತಡ ತರದಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಮಧ್ಯವರ್ತಿಗಳ ಹಸ್ತಕ್ಷೇಪ ತಡೆಯಬೇಕು. ಭ್ರಷ್ಟಾಚಾರ ಹಾಗೂ ಕಮಿಷನ್ ಆರೋಪಗಳ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ರೈತರು ಸರ್ಕಾರದ ವಿರುದ್ಧ ಇಲ್ಲ. ಆದರೆ ಬದುಕಿನ ಆಧಾರವಾದ ಭೂಮಿಗೆ ನ್ಯಾಯಯುತ ಬೆಲೆ ಮತ್ತು ಗೌರವ ಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಹೊನ್ನುರಸ್ವಾಮಿ ಕೆ.ಟಿ. ತಿಳಿಸಿದ್ದಾರೆ.

ಹೆಲ್ಮೆಟ್ ಜಾಗೃತಿಗಾಗಿ ಬೈಕ್ ಸವಾರಿ ಮಾಡಿದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಹೆಲ್ಮೆಟ್ ಧರಿಸುವುದು ಕಡ್ಡಾಯ