
17th June 2025
*ವಚನ ಸಂಸ್ಕೃತಿಯನ್ನು ಲೋಕವಿಸ್ತಾರಗೊಳಿಸಿದ ತರಳಬಾಳು ಜಗದ್ಗುರುಗಳು*
===============================================
[ಇಂದು ತರಳಬಾಳು ಬೃಹನ್ಮಠದ ಪೂಜ್ಯ ಶ್ರೀ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ೭೮ನೆಯ ಜನ್ಮದಿನ. ಪೂಜ್ಯರಿಗೆ ಭಕ್ತಿಯ ಪ್ರಣಾಮಗಳನ್ನು ಸಲ್ಲಿಸುತ್ತ, ಪೂಜ್ಯರ ಕುರಿತಾದ ಕೆಲವು ಚಿಂತನೆಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.]
ದಿನಾಂಕ: ೮ ಡಿಸೆಂಬರ್ ೧೯೯೯ರಂದು ತರಳಬಾಳು ಬೃಹನ್ಮಠದ ಪೂಜ್ಯ ಶ್ರೀ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಬೆಳಗಾವಿ ಮಹಾನಗರಕ್ಕೆ ದಯಮಾಡಿಸಿದ್ದರು. ಅಂದು ನಾಗನೂರು ರುದ್ರಾಕ್ಷಿಮಠದ ಪೂಜ್ಯ ಡಾ. ಶಿವಬಸವ ಮಹಾಸ್ವಾಮಿಗಳವರ ಜಯಂತಿ ಮಹೋತ್ಸವ ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಪರಮಪೂಜ್ಯ ಜಗದ್ಗುರುಗಳು ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ವೇದಿಕೆಗೆ ಹೋಗುವ ಮೊದಲು ಅರ್ಧ ಗಂಟೆ, ನನ್ನ ಗುರುಗಳಾದ ಡಾ. ಎಸ್. ಆರ್. ಗುಂಜಾಳ ಅವರ ಪ್ರಾರ್ಥನೆಯ ಮೇರೆಗೆ ಜಗದ್ಗುರುಗಳು ನಾಗನೂರು ರುದ್ರಾಕ್ಷಿಮಠದ ಆವರಣದಲ್ಲಿರುವ ‘ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯ’ವನ್ನು ವೀಕ್ಷಿಸಲು ಆಗಮಿಸಿದರು. ಬಸವಾದಿ ಶಿವಶರಣರ ವಚನಸಾಹಿತ್ಯವನ್ನು ಒಳಗೊಂಡು ಇಡೀ ಲಿಂಗಾಯತ ಧರ್ಮ ಸಮಾಜ ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದ ಇಪ್ಪತ್ತು ಸಾವಿರಕ್ಕೂ ಹೆಚ್ಚು ಗ್ರಂಥಗಳನ್ನು ಒಂದೆಡೆ ಸಂಗ್ರಹಿಸಿಡಲಾಗಿತ್ತು, ಲಿಂಗಾಯತಕ್ಕೆ ಸಂಬಂಧಿಸಿದ ಶಿವಾನುಭವ, ತರಳಬಾಳು, ಸಿದ್ಧಗಂಗಾ, ಸದ್ಧರ್ಮ ದೀಪಿಕೆ ಮೊದಲಾದ ಪತ್ರಿಕೆಗಳ ಹಳೆಯ ಸಂಚಿಕೆಗಳನ್ನು ಸಂಗ್ರಹಿಸಿಡಲಾಗಿತ್ತು. ಈ ಗ್ರಂಥಾಲಯವನ್ನು ಸೂಕ್ಷ್ಮವಾಗಿ ಅರ್ಧಗಂಟೆಗೂ ಹೆಚ್ಚು ವೀಕ್ಷಿಸಿದ ಪೂಜ್ಯ ಜಗದ್ಗುರು ಮಹಾಸನ್ನಿಧಿಯವರಿಗೆ ತುಂಬ ಸಂತೋಷವಾಯಿತು. ಡಾ. ಎಸ್. ಆರ್. ಗುಂಜಾಳ ಗುರುಗಳ ಶ್ರಮ ಶ್ರದ್ಧೆಯನ್ನು ತುಂಬ ಮುಕ್ತಮನದಿಂದ ಪೂಜ್ಯರು ಶ್ಲಾಘಿಸಿದರು. ಆಗ ಡಾ. ಗುಂಜಾಳ ಗುರುಗಳು ನನ್ನನ್ನು ಪೂಜ್ಯರಿಗೆ ಪರಿಚಯಿಸುತ್ತ, ‘ಬುದ್ಧಿ, ಈತ ಪ್ರಕಾಶ, ನನ್ನ ಶಿಷ್ಯ. ಇಡೀ ಗ್ರಂಥಾಲಯದಲ್ಲಿರುವ ಎಲ್ಲ ಪುಸ್ತಕಗಳ ಹೆಸರು, ಲೇಖಕರ ಹೆಸರು, ಪ್ರಕಟನಾ ಸಂಸ್ಥೆ ಮೊದಲಾದ ಎಲ್ಲ ವಿವರಗಳನ್ನು ತನ್ನ ನೆನಪಿನಶಕ್ತಿಯಿಂದ ಹೇಳಬಲ್ಲ ಮೇಧಾವಿ’ ಎಂದು ಹೇಳಿದರು. ಆಗ ಜಗದ್ಗುರುಗಳು ತಮ್ಮ ಕೃಪಾಕಾರುಣ್ಯದೃಷ್ಟಿಯನ್ನು ನನ್ನ ಮೇಲೆ ಬೀರಿ, “ಹೇಳಿಕೇಳಿ ಹೆಸರೇ ‘ಪ್ರಕಾಶ’, ಇನ್ನು ಬೆಳಗದೆ ಬಿಟ್ಟಿತ್ತೆ ಗುಂಜಾಳರೇ?” ಎಂದು ನಗುಮುಖದಿಂದ ಹೇಳಿದರು. ನನಗೂ ನನ್ನ ಗುರುಗಳಾದ ಡಾ. ಗುಂಜಾಳ ಗುರುಗಳಿಗೂ ಆಶೀರ್ವದಿಸಿ, ಐದು ಸಾವಿರ ರೂಪಾಯಿಗಳ ಚೆಕ್ ಬರೆದು, ಡಾ. ಗುಂಜಾಳ ಗುರುಗಳಿಗೆ ನೀಡಿದರು. ಇದು ನನ್ನ ಜೀವನದಲ್ಲಿ ಎಂದೂ ಮರೆಯಲಾರದ ಘಟನೆ. ಅಂದು ಪೂಜ್ಯರು ಸಂದರ್ಶಕರ ಪುಸ್ತಕದಲ್ಲಿ ಬರೆದ ಬರೆಹ ಹೀಗಿದೆ :
“ಲಿಂಗಾಯತ ಧರ್ಮದ ಯಾವುದೇ ವಿಷಯವನ್ನು ಕುರಿತು ಆಳವಾದ ಅಧ್ಯಯನವನ್ನು ಮಾಡಬಯಸುವ ಸಂಶೋಧಕರು ಬೇರೆ ಎಲ್ಲಿಯೂ ಹೋಗುವ ಅವಶ್ಯಕತೆ ಇಲ್ಲ. ಶ್ರೀ.ಮ.ನಿ.ಪ್ರ.ಸಿದ್ಧರಾಮ ಸ್ವಾಮಿಗಳ ಕೃಪಾಶ್ರಯದಲ್ಲಿ ಮೈದಾಳಿರುವ ಲಿಂಗಾಯತ ಸಂಶೋಧನಾ ಕೇಂದ್ರ ಗ್ರಂಥಾಲಯಕ್ಕೆ ಬಂದರೆ ಸಾಕು ಒಮ್ಮೆ ಗ್ರಂಥಾಲಯದ ಒಳಗೆ ಕಾಲಿಟ್ಟರೆ ‘ಚಕ್ರವ್ಯೂಹ’ದಂತೆ ಹೊರಗೆ ಹೋಗಲು ಸಾಧ್ಯ ಆಗುವುದಿಲ್ಲ. ಸಂಶೋಧಕರನ್ನು ಇಲ್ಲಿ ಬಂಧಿಸಿಡುವಂತೆ ಈ ಚಕ್ರವ್ಯೂಹ ರಚಿಸಿರುವರು. ಡಾ| ಎಸ್.ಆರ್.ಗುಂಜಾಳ ಅವರು ‘ಜೀವಂತ ಲಿಂಗಾಯತ ಮಾಹಿತಿಕೋಶ’ವೇ ಆಗಿದ್ದಾರೆ. ಅವರಿಗೆ ಬಸವಾದಿ ಪ್ರಮಥರು ಹೆಚ್ಚಿನ ಆಯುರಾರೋಗ್ಯವನ್ನು ಅನುಗ್ರಹಿಸಲಿ ಎಂದು ಹಾರೈಸುತ್ತೇವೆ.
ದಿ-೮-೧೨-೧೯೯೯ ಶ್ರೀ ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆ
ಪೂಜ್ಯ ಜಗದ್ಗುರುಗಳು ಅಂದು ಹಾರೈಸಿದಂತೆ ಇಂದು ನನ್ನ ಗುರುಗಳಾದ ಡಾ. ಗುಂಜಾಳ ಅವರು ೯೩ರ ಇಳಿ ವಯಸ್ಸಿನಲ್ಲಿಯೂ ಅತ್ಯಂತ ಕ್ರಿಯಾಶೀಲರಾಗಿ, ಚೈತನ್ಯಶೀಲರಾಗಿ ಬದುಕಿದ್ದಾರೆ.
ತದನಂತರ ಪೂಜ್ಯರು ಬೆಳಗಾವಿಗೆ ದಯಮಾಡಿಸಿದ್ದು ೧೩.೧೧.೨೦೦೨ರಂದು. ಅಂದು ಕೆ.ಎಲ್.ಇ. ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ. ಬಿ. ಎಸ್. ಜೀರಗೆ ಹಾಲ್ನಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಆಗ ಸಾನ್ನಿಧ್ಯ ವಹಿಸಿದ್ದ ಪೂಜ್ಯ ಶ್ರೀ ಜಗದ್ಗುರು ಮಹಾಸನ್ನಿಧಿಯವರು ತಮ್ಮ ಆಶೀರ್ವಚನದ ಆರಂಭದಲ್ಲಿ ಒಂದು ಸ್ವಾರಸ್ಯಕರ ಸಂಗತಿಯನ್ನು ಪ್ರಸ್ತಾಪಿಸಿದರು.
‘ಈ ಜಗತ್ತಿನಲ್ಲಿ ತಾಯಿ ಹುಟ್ಟಿದ ನಂತರ ಮಗಳು ಹುಟ್ಟುತ್ತಾಳೆ ಎಂಬುದು ಲೋಕಪ್ರಸಿದ್ಧವಾದ ಸತ್ಯ. ಆದರೆ ನಿಮಗೊಂದು ಆಶ್ಚರ್ಯದ ಸಂಗತಿಯನ್ನು ನಾವು ಇಂದು ಇಲ್ಲಿ ಹೇಳಬಯಸುತ್ತೇವೆ, ಮಗಳು ಮೊದಲು ಹುಟ್ಟಿದ್ದಾಳೆ; ತಾಯಿ ನಂತರ ಜನಿಸಿದ್ದಾಳೆ. ಇದೊಂದು ಲೋಕ ಸೋಜಿಗವೆನಿಸುವುದಿಲ್ಲವೆ? ಎಂದು ಸಭಿಕರನ್ನು ಉದ್ದೇಶಿಸಿ ಕೇಳಿದರು. ಎಲ್ಲರೂ ಒಂದು ಕ್ಷಣ ಸ್ತಬ್ಧರಾಗಿ ಕುಳಿತರು, ಪೂಜ್ಯರು ಈ ಮಾತನ್ನು ಹೇಗೆ ಸಮರ್ಥಿಸಿ ಹೇಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿ ಮೂಡಿತ್ತು. ಆಗ ಜಗದ್ಗುರುಗಳು ತಮ್ಮ ಮಾತು ಮುಂದುವರಿಸಿ, “ಇಂದು ಕೆ.ಎಲ್.ಇ. ಸಂಸ್ಥೆಯ ಅನೇಕ ಅಂಗ ಸಂಸ್ಥೆಗಳು ಕರ್ನಾಟಕ ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಟ್ಟಿವೆ. ಹೀಗಾಗಿ ಈ ಸಂಸ್ಥೆಗಳಿಗೆಲ್ಲ ಮಾತೃಸ್ಥಾನದಲ್ಲಿ ಇರುವುದು ಕರ್ನಾಟಕ ವಿಶ್ವವಿದ್ಯಾಲಯ. ವಿಶೇಷವೆಂದರೆ, ೧೯೧೬ರಲ್ಲಿಯೇ ಕೆ.ಎಲ್.ಇ. ಸಂಸ್ಥೆ ಜನ್ಮತಾಳಿತು, ಆದರೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ೧೯೫೦ರ ದಶಕದಲ್ಲಿ ಅಸ್ತಿತ್ವಕ್ಕೆ ಬಂದಿತು. ಹೀಗಾಗಿ ಇಲ್ಲಿ ತಾಯಿಯಾದ ಕರ್ನಾಟಕ ವಿಶ್ವವಿದ್ಯಾಲಯಕ್ಕಿಂತ ಮಗಳು ಕೆ.ಎಲ್.ಇ. ಮೊದಲು ಹುಟ್ಟಿದ್ದಾಳೆ. ಇದು ವಿಶೇಷವಲ್ಲವೆ?” ಎಂದು ಹೇಳಿದಾಗ ಕೂಡಿದ ಜನರೆಲ್ಲ ಚಪ್ಪಾಳೆಯಿಂದ ಪೂಜ್ಯರ ಮಾತುಗಳಿಗೆ ಕಿವಿಯಾದರು.
ಪೂಜ್ಯರು ಎಲ್ಲಿಯೇ ಸಭೆ ಸಮಾರಂಭಗಳಿಗೆ ಹೋಗಲಿ, ಪ್ರಾರಂಭದಲ್ಲಿ ಇಂತಹ ಒಂದು ವಿಶೇಷವಾದ ಸಂಗತಿಯನ್ನು ಪ್ರಸ್ತಾಪಿಸಿ, ಸಭೆಯಲ್ಲಿ ಪಾಲ್ಗೊಂಡ ಸಮಸ್ತ ಜನರನ್ನು ತಮ್ಮ ಮಾತುಗಳತ್ತ ಆಕರ್ಷಿಸುವಂತಹ ಒಂದು ಅದಮ್ಯ ಸಾಮರ್ಥ್ಯ ಪೂಜ್ಯರ ಮಾತುಗಳಿಗೆ ಇರುವುದು ಸರ್ವರಿಗೂ ವೇದ್ಯವಾದ ಸಂಗತಿ.
ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ತರಳಬಾಳು ಬೃಹನ್ಮಠವು ನಾಡಿನ ಶ್ರೇಷ್ಠ ಧರ್ಮಪೀಠಗಳಲ್ಲಿ ಒಂದು. ಸಾವಿರಾರು ವರ್ಷಗಳ ಸುದೀರ್ಘವೂ ಅವಿಚ್ಛಿನ್ನವೂ ಆದ ಇತಿಹಾಸ ಹೊಂದಿದ ಈ ಸದ್ಧರ್ಮ ಸಿಂಹಾಸಿನಪೀಠದ ಘನತೆ ಗೌರವಗಳು ಗೌರಿಶಂಕರದೆತ್ತರಕ್ಕೆ ಬೆಳೆದದ್ದು ಪೂಜ್ಯ ಶ್ರೀ ಜಗದ್ಗುರು ಶಿವಕುಮಾರ ಮಹಾಸ್ವಾಮಿಗಳವರ ಕಾಲಕ್ಕೆ. ಅಜ್ಞಾನ ಅನಕ್ಷರತೆಯಿಂದ ಬಳಲುತ್ತಿದ್ದ ಸಮಾಜದ ಮಕ್ಕಳಿಗೆ ಅನ್ನ-ಆಶ್ರಯ-ಜ್ಞಾನ ಎಂಬ ತ್ರಿವಿಧ ದಾಸೋಹಗೈದು, ನಾಡನುದ್ಧರಿಸಿದ ಪುಣ್ಯಪುರುಷರವರು. ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳವರು ಗುಣಗ್ರಾಹಿಗಳಾಗಿದ್ದರು. ಯಾವ ವ್ಯಕ್ತಿಯಲ್ಲಿ ಎಂತಹ ಸಾಮರ್ಥ್ಯ ಅಡಗಿದೆ ಎಂಬುದನ್ನು ಗುರುತಿಸಬಲ್ಲಬರಾಗಿದ್ದರು. ಅಂತೆಯೆ ತಮ್ಮ ತರುವಾಯ ತರಳಬಾಳು ಬೃಹನ್ಮಠವನ್ನು ಅತ್ಯಂತ ವ್ಯವಸ್ಥಿತವಾಗಿ ಮುನ್ನಡೆಸಿಕೊಂಡು ಹೋಗುವ ಒಬ್ಬ ಸಮರ್ಥ ಉತ್ತರಾಧಿಕಾರಿಯನ್ನು ಅವರು ಆಯ್ಕೆ ಮಾಡಿದ್ದು ಒಂದು ವಿಶೇಷ ಘಟನೆಯಿಂದ. ಶಿವಮೊಗ್ಗ ಜಿಲ್ಲೆಯ ತುಂಗಾ ಮತ್ತು ಭದ್ರಾ ನದಿಗಳ ಸಂಗಮವಾಗುವ ಸಮೀಪದ ಊರು ಸೂಗೂರು ಗ್ರಾಮದಲ್ಲಿ ‘ಶಿವಮೂರ್ತಿ’ ಎಂಬ ಬಾಲಕ ತೆಂಗಿನ ಕಾಯಿ ಚಿಪ್ಪಿನಿಂದ ಸಂಗೀತ ಸಾಧನ ಮಾಡಿಕೊಂಡು ಬಾರಿಸುವುದನ್ನು ನೋಡಿದ ಪೂಜ್ಯರು, ಈ ಬಾಲಕನಲ್ಲಿ ಏನೋ ಒಂದು ಅದ್ಭುತ ಪ್ರತಿಭೆ ಇದೆ ಎಂದು ಗುರುತಿಸಿ, ಜ್ಯೋತಿ ಮುಟ್ಟಿದ ಬತ್ತಿ ಜ್ಯೋತಿಯೇ ಆಗುವಂತೆ, ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಸಂಪರ್ಕ ಸಾನ್ನಿಧ್ಯಕ್ಕೆ ಬಂದ ‘ಶಿವಮೂರ್ತಿ’ ಎಂಬ ಚಿಕ್ಕ ಬಾಲಕ ಪೂಜ್ಯ ಜಗದ್ಗುರುಗಳ ಸಮರ್ಥ ಉತ್ತರಾಧಿಕಾರಿಗಳಾಗಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳಾಗಿ, ಶ್ರೀಮಠದ ಎತ್ತರ ಬಿತ್ತರಗಳು ಇನ್ನಷ್ಟು ವಿಸ್ತಾರೋನ್ನತವಾಗಿ ಬೆಳಗುವಂತೆ ಮಾಡಿದರು.
ಪೂಜ್ಯರು ಶಿವಮೊಗ್ಗ ಜಿಲ್ಲೆಯ ಸೂಗೂರು ಗ್ರಾಮದ ಶರಣ ಶ್ರೀ ಈಶ್ವರಯ್ಯ ಮತ್ತು ಗಂಗಮ್ಮ ದಂಪತಿಗಳ ಮಗನಾಗಿ ಜೂನ ೧೬, ೧೯೪೭ರಂದು ಜನಿಸಿದರು. ಬಾಲ್ಯದಲ್ಲಿಯೇ ಕಾಶಿ ಮಹಾಲಿಂಗ ಮಹಾಸ್ವಾಮಿಗಳವರಿಂದ ಇಷ್ಟಲಿಂಗದೀಕ್ಷೆಯನ್ನು ಪಡೆದರು. ೧೯೬೩ರಲ್ಲಿ ಶಿವಮೊಗ್ಗ ಸರಕಾರಿ ಶಾಲೆಯಿಂದ ಮ್ಯಾಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾದರು. ವಿಜ್ಞಾನದಲ್ಲಿ ಆಸಕ್ತಿಯಿದ್ದರೂ ೧೯೬೭ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಿಂದ ಕನ್ನಡ ಮತ್ತು ಸಂಸ್ಕೃತ ವಿಷಯ ಆಯ್ದುಕೊಂಡು ಬಿ.ಎ. ಪದವಿಯನ್ನು ಚಿನ್ನದ ಪದಕ ಮತ್ತು ಏಳನೆಯ ರ್ಯಾಂಕ್ನೊಂದಿಗೆ ಸಂಪಾದಿಸಿದರು. ೧೯೬೯ರಲ್ಲಿ ಕಾಶಿ ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಸಂಪಾದಿಸಿದರು. ‘ಎ ಕ್ರಿಟಿಕಲ್ ಸ್ಟಡಿ ಆಫ್ ಸೂತ್ರ ಸಂಹಿತಾ’ ಕುರಿತು ಪ್ರಬಂಧ ಮಂಡಿಸಿ ಸಂಸ್ಕೃತ ಅಧ್ಯಯನದಲ್ಲಿ ಡಾಕ್ಟರೇಟ್ ಪದವಿ ಪಡೆದರು. ೧೯೭೭-೭೯ರಲ್ಲಿ ಆಸ್ಟ್ರೀಯಾ ದೇಶದ ವಿಯೆನ್ನಾ ವಿಶ್ವವಿದ್ಯಾಲಯದ ಇಂಡಾಲಜಿ ಸಂಸ್ಥೆಯಲ್ಲಿ ಉನ್ನತ ವ್ಯಾಸಂಗ ಪೂರೈಸಿದರು.
ಪೂಜ್ಯರು ಸ್ವದೇಶಕ್ಕೆ ವಿದ್ಯಾಭೂಷಿತರಾಗಿ ಮರಳಿದ ಸಂಗತಿ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳವರಿಗೆ ಅತ್ಯಂತ ಸಂತೋಷವನ್ನುಂಟು ಮಾಡಿತು. ನಾಡಿನ ಮಠಾಧೀಶರಲ್ಲಿ ವಿಭಿನ್ನ ಆಲೋಚನೆಯುಳ್ಳ ಪೂಜ್ಯರು ತಮ್ಮ ಅರವತ್ತನೆಯ ವರ್ಷಕ್ಕೆ ಮಠಾಧಿಪತಿ ಕರ್ತವ್ಯಕ್ಕೆ ನಿವೃತ್ತಿ ಘೋಷಿಸಿದರು. ೧೯೭೯ ಫೆಬ್ರುವರಿ ೧೧ ರಂದು ಪೂಜ್ಯ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವ ಪಟ್ಟಾಭಿಷೇಕ ನೆರವೇರಿಸಿ, ಶ್ರೀಮಠದ ಸಮಸ್ತ ಜವಾಬ್ದಾರಿಯನ್ನು ಅವರಿಗೆ ವಹಿಸಿ, ತಾವು ನಿಟಿಲ ತಟದಲ್ಲಿ ಮಠವ ಕಟ್ಟಿಕೊಂಡು ನಿಶ್ಚಿಂತ ನಿರಾಳರಾಗಿ ಬದುಕಿದರು.
ಪೂಜ್ಯ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರು ತರಳಬಾಳು ಬೃಹನ್ಮಠದ ಕರ್ಣಧಾರತ್ವವನ್ನು ವಹಿಸಿಕೊಂಡ ನಂತರ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಯತ್ತ ಗಮನ ಹರಿಸಿದರು. ಶ್ರೀಮಠದ ಶಾಖಾಮಠಗಳನ್ನು ಪುನರುಜ್ಜೀವನಗೊಳಿಸಿದರು. ಸಮಾಜ ಸಂಸ್ಕೃತಿ ಕುರಿತು ತಮ್ಮ ಆಶೀರ್ವಚನಗಳ ಮೂಲಕ ಸಂಚಲವನ್ನುಂಟು ಮಾಡಿದರು.
ಸ್ವತಃ ಬರಹಗಾರರಾಗಿರುವ ಪೂಜ್ಯ ಜಗದ್ಗುರುಗಳು ೧೯೭೯ರಲ್ಲಿಯೇ ‘ಶ್ರೀ ಮರುಳಸಿದ್ಧದೇವರ ಚರಿತ್ರೆ’ ಕೃತಿಯನ್ನು ಸಂಪಾದಿಸಿ ಪ್ರಕಟಿಸಿದ್ದರು. ತಮ್ಮ ಗುರುಗಳಾದ ಶ್ರೀ ಶಿವಕುಮಾರ ಸ್ವಾಮಿಗಳವರ ದಿನಚರಿಯನ್ನು ಆಧರಿಸಿ ‘ಆತ್ಮನಿವೇದನೆ’ ಎಂಬ ಮೌಲಿಕ ಗ್ರಂಥವನ್ನು ಸಂಪಾದಿಸಿ ಪ್ರಕಟಿಸಿದ್ದರು.
ಇಂದು ಒಂದು ಚಿಕ್ಕ ಮಠಕ್ಕೆ ಸ್ವಾಮಿಗಳಾದವರು ಒಂದು ಸಂದೇಶ ಬರೆದು ಕೊಡಿ ಎಂದು ಕೇಳಿದರೆ, ನಮಗೆ ಸಮಯವಿಲ್ಲ ಎನ್ನುತ್ತಾರೆ. ಇನ್ನು ಕೆಲವರು ನೀವೇ ಬರೆದು, ನಮ್ಮ ಹೆಸರು ಹಾಕಿ ಎನ್ನುತ್ತಾರೆ. ಇಂತಹ ಬೇಜವಾಬ್ದಾರಿ ಮಠಾಧೀಶರು ನಮ್ಮ ಕಣ್ಣ ಮುಂದೆ ಇರುವಾಗ, ಕಳೆದ ೧೮ ವರುಷಗಳಿಂದ ಪೂಜ್ಯ ಶ್ರೀ ಜಗದ್ಗುರುಗಳು ವಿಜಯ ಕರ್ನಾಟಕಕ್ಕೆ ‘ಬಿಸಿಲು ಬೆಳದಿಂಗಳು’ ಎಂಬ ಮೌಲಿಕ ಅಂಕಣ ಬರಹವನ್ನು ಬರೆಯುತ್ತ ಬಂದಿದ್ದಾರೆ. ಈ ಅಂಕಣ ಬರೆಹಗಳೆಲ್ಲವೂ ೨೨ ಕೃತಿಗಳಲ್ಲಿ ಪ್ರಕಟಗೊಂಡು ಕನ್ನಡ ಸಾರಸ್ವತ ಪ್ರಪಂಚವನ್ನು ಸಿರಿವಂತಗೊಳಿಸಿವೆ.
೧೯೮೬ರಲ್ಲಿಯೇ ತಮ್ಮ ಶ್ರೀಮಠದ ಎಲ್ಲ ಆಡಳಿತ ವ್ಯವಸ್ಥೆಯಲ್ಲಿ ಕಂಪ್ಯೂಟರ್ ವ್ಯವಸ್ಥೆಯನ್ನು ಅಳವಡಿಸಿದ ಮೊದಲ ಮಠಾಧೀಶರೆಂಬ ಕೀರ್ತಿಗೆ ಭಾಜನರಾಗಿರುವ ಪೂಜ್ಯ ಜಗದ್ಗುರುಗಳು ತಮ್ಮ ಕಂಪ್ಯೂಟರ್ ಜ್ಞಾನದ ಮೂಲಕ ಇಡೀ ವಚನ ಸಾಹಿತ್ಯವನ್ನು ಕಂಪ್ಯೂಟರ್ಗೆ ಅಳವಡಿಸಿ, ಇಂದು ಜಗತ್ತಿನಾದ್ಯಂತ ಯಾರು ಬೇಕಾದರೂ ಬೇಕಾದ ವಚನವನ್ನು ಕ್ಷಣಾರ್ಧದಲ್ಲಿ ನೋಡುವಂತೆ ಮಾಡಿದ ಕೀರ್ತಿ ಜಗದ್ಗುರುಗಳವರದು. ಇತ್ತೀಚಿಗಂತೂ ‘https://vachana.taralabalu.in’ ಈ ಜಾಲತಾಣದ ಮೂಲಕ ಸಮಗ್ರ ವಚನಗಳ ಕನ್ನಡ ಆವೃತ್ತಿ ಜೊತೆಗೆ ಇಂಗ್ಲಿಷ್, ತಮಿಳು, ತೆಲಗು, ಮರಾಠಿ, ಹಿಂದಿ ಭಾಷೆಗಳಲ್ಲಿಯೂ ಆ ವಚನ ಮತ್ತು ವಚನದ ಅರ್ಥ ದೊರೆಯುವಂತೆ ಮಾಡಿರುವುದು ನಿಜಕ್ಕೂ ಸಮಸ್ತ ಲಿಂಗಾಯತರು ಹೆಮ್ಮೆ ಮತ್ತು ಅಭಿಮಾನ ಪಡುವ ಸಂಗತಿಯಾಗಿದೆ. ಅಲ್ಲದೆ ಪಾಣಿನಿಯ ಅಷ್ಟಾಧ್ಯಾಯಿ ಗ್ರಂಥದ ಎಲ್ಲ ಸೂತ್ರಗಳನ್ನು ಗಣಕ ಯಂತ್ರಕ್ಕೆ ಸೇರ್ಪಡೆ ಮಾಡಿ, ಸಂಸ್ಕೃತ ಅಧ್ಯಯನಾಸಕ್ತರಿಗೆ ತುಂಬ ಉಪಕಾರ ಮಾಡಿದ್ದಾರೆ.
ಪ್ರತಿವರ್ಷ ಮಾಘಮಾಸದಲ್ಲಿ ತರಳಬಾಳು ಹುಣ್ಣಿಮೆ ಕಾರ್ಯಕ್ರಮವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸುತ್ತ ಬಂದಿದ್ದಾರೆ. ಮಾನವೀಯ ಅಂತಃಕರಣ ಹೊಂದಿರುವ ಪೂಜ್ಯರು ಬರಗಾಲ, ಪ್ರಾಕೃತಿಕ ವಿಕೋಪಗಳಾದ ಸಂದರ್ಭಗಳಲ್ಲಿ ತರಳಬಾಳು ಹುಣ್ಣಿಮೆ ಕಾರ್ಯಕ್ರಮಗಳನ್ನು ಅತ್ಯಂತ ಸರಳವಾಗಿ ಆಚರಿಸುತ್ತ ಬಂದಿದ್ದಾರೆ.
ಗ್ರಾಮೀಣ ಪ್ರದೇಶದ ಜನರು ಅಜ್ಞಾನದಿಂದ ತಮ್ಮ ತಮ್ಮಲ್ಲಿ ಪ್ರತಿಷ್ಠೆ ಮತ್ತು ಅಹಂಕಾರ ಬೆಳೆಸಿಕೊಂಡು ನ್ಯಾಯದಾನಕ್ಕಾಗಿ ಕೋರ್ಟ ಮೆಟ್ಟಿಲೇರುವ ಸಂದರ್ಭಗಳೇ ಹೆಚ್ಚು. ಆದರೆ ಪೂಜ್ಯರು ಶ್ರೀಮಠದಲ್ಲಿ ಸದ್ಧರ್ಮ ನ್ಯಾಯಪೀಠದ ಮೂಲಕ ನ್ಯಾಯದಾನ ಮಾಡುವ ಕಾರ್ಯಕ್ರಮ ನಡೆಸುತ್ತಿರುವುದು ನಿಜಕ್ಕೂ ಮಾದರಿಯಾಗಿದೆ.
ರೈತರ ಬಾಳು ಬೆಳಗಬೇಕೆಂಬ ಸದಾಶಯದಿಂದ ಸರಕಾರದ ಮೇಲೆ ಒತ್ತಡ ತಂದು, ಭಕ್ತರಲ್ಲಿ ಜಾಗೃತಿ ಮೂಡಿಸಿ ಕೆರೆ ತುಂಬಿಸುವ ಕಾರ್ಯ ಮಾಡುವ ಮೂಲಕ ಆಧುನಿಕ ಭಗೀರಥ ಎನಿಸಿಕೊಂಡಿದ್ದಾರೆ.
ಇಂತಹ ಪರಮಪೂಜ್ಯ ಜಗದ್ಗುರುಗಳು ೭೭ ವಸಂತಗಳನ್ನು ಪೂರೈಸಿ, ೭೮ನೆಯ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಪೂಜ್ಯರಿಗೆ ಭಕ್ತಿಪೂರ್ವಕ ಪ್ರಣಾಮಗಳು. ಪೂಜ್ಯರ ಕೃಪಾಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ.
_*ಪ್ರಕಾಶ ಗಿರಿಮಲ್ಲನವರ*_
ಬೆಳಗಾವಿ
ಮೊ: 9902130041
ಮಾದರಿಯಾದ ಚಡಚಣದ ಶತಮಾನ (೧೮೦ ವರ್ಷ) ಕಂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಣಾತ್ಮಕ ಶಿಕ್ಷಣ ಸರಕಾರಿ ಶಾಲೆಗೆ ತೋರಣ.
ಗಂಡುಮೆಟ್ಟಿನ ನಾಡಿನಲ್ಲಿ ಜಾನಪದ ಕಲೆಯ ಜೊತೆಗೆ ಬಸವಣ್ಣನವರ ಆದರ್ಶಗಳನ್ನು ಪಾಲಿಸೋಣ- ಎನ್.ಎಚ್ ಕೊನರಡ್ಡಿ