


27th June 2026
ದಾವಣಗೆರೆ, ಜೂನ್ 27: ದಾವಣಗೆರೆ ಜಿಲ್ಲಾ ಪ್ರಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ-2026ರ ನಾಲ್ಕನೇ ಪೂರ್ವಭಾವಿ ಸಭೆಯು ಶನಿವಾರ ಸಂಜೆ 4.30ಕ್ಕೆ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಿ. ವಾಮದೇವಪ್ಪ ತೊಗಲೇರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಸಮ್ಮೇಳನದ ಸಿದ್ಧತೆಗಾಗಿ ರಚಿಸಲಾದ ವಿವಿಧ ಸಮಿತಿಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿ, ಸಮ್ಮೇಳನದ ಯಶಸ್ವಿ ಆಯೋಜನೆಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಹಂಚಿಕೊಂಡರು.
ಸಭೆಯಲ್ಲಿ ಸಮ್ಮೇಳನಾಧ್ಯಕ್ಷರ ಆಯ್ಕೆ, ವಿವಿಧ ಗೋಷ್ಠಿಗಳ ಅಧ್ಯಕ್ಷರ ನೇಮಕ, ಉಪನ್ಯಾಸಗಳು ಹಾಗೂ ಇತರೆ ಸಾಹಿತ್ಯಿಕ ಕಾರ್ಯಕ್ರಮಗಳ ರೂಪುರೇಷೆ ಕುರಿತು ಚರ್ಚಿಸಿ, ಅದರ ಜವಾಬ್ದಾರಿಯನ್ನು ಸಾಹಿತ್ಯ ವೇದಿಕೆ ತಂಡಕ್ಕೆ ವಹಿಸಲು ನಿರ್ಧರಿಸಲಾಯಿತು. ಜೊತೆಗೆ ಮಹಿಳೆಯರಿಗಾಗಿ ಪ್ರಬಂಧ ಸ್ಪರ್ಧೆ, ರಂಗೋಲಿ ಸ್ಪರ್ಧೆ ಹಾಗೂ ಚಿತ್ರಕಲೆ ಸ್ಪರ್ಧೆಗಳನ್ನು ಆಯೋಜಿಸುವ ತೀರ್ಮಾನಕ್ಕೂ ಸಭೆಯು ಅನುಮೋದನೆ ನೀಡಿತು
.
ಇದಕ್ಕೂ ಮುನ್ನ ನಡೆದ ಸಾಂಸ್ಕೃತಿಕ ಸಮಿತಿಯ ಸಭೆಯಲ್ಲಿ ಅಧ್ಯಕ್ಷರಾದ ಬಿ. ವಾಮದೇವಪ್ಪ ತೊಗಲೇರಿ ಅವರ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಗ್ರ ರೂಪುರೇಷೆಯನ್ನು ಸಮಿತಿಯ ಅಧ್ಯಕ್ಷೆ ಯಶಾ ದಿನೇಶ್ ಮಂಡಿಸಿದರು. ನಗರ ಹಾಗೂ ಗ್ರಾಮೀಣ ಭಾಗಗಳ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಇದುವರೆಗೆ ವಿವಿಧ ಸಮಿತಿಗಳಿಂದ ನಡೆದಿರುವ ಸಿದ್ಧತೆಗಳ ಪರಿಶೀಲನೆ ನಡೆಸಿ, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು. ಇದೇ ವೇಳೆ, ಸಮ್ಮೇಳನದ ಪ್ರಧಾನ ಸಂಚಾಲಕಿ ವೀಣಾ ಕೃಷ್ಣಮೂರ್ತಿ ಅವರು ಈವರೆಗೆ ನಡೆದ ಮೂರು ಪೂರ್ವಭಾವಿ ಸಭೆಗಳ ಸಂಕ್ಷಿಪ್ತ ವರದಿಯನ್ನು ಸಭೆಗೆ ಮಂಡಿಸಿದರು.
ಸಭೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರೇವಣ್ಣ ಸಿದ್ಧಪ್ಪ ಅಂಗಡಿ, ಯಶಾ ದಿನೇಶ್, ಹೇಮಾ ಶಾಂತಪ್ಪ ಪೂಜಾರಿ, ಚಂದ್ರಿಕಾ ಮಂಜುನಾಥ್, ಹೇಮಾ ಗಣೇಶ್ ಶೇಠ್, ಕುಸುಮ ಲೋಕೇಶ್, ನಿರ್ಮಲಾ ಶಿವಕುಮಾರ್, ಸುವರ್ಣಮ್ಮ, ಮಲ್ಲಮ್ಮ ನಾಗರಾಜ್, ಮಮತಾ ನಾಗರಾಜ್, ಪೂರ್ಣಿಮಾ, ಸಂಧ್ಯಾ, ಒಂಕಾರಮ್ಮ ಹಾಗೂ ನಮ್ನ್ಯೂಸ್ ಸಂಸ್ಥಾಪಕರಾದ ರಾಜೇಶ್ವರಿ ಕೇಶವ್ ಸೇರಿದಂತೆ ಹಲವು ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಈ ಕುರಿತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಯಲ್ಲಿ ಎ. ಬಿ. ರುದ್ರಮ್ಮ ಮಾಹಿತಿ ನೀಡಿದ್ದಾರೆ.