Skip to main content
ರತ್ನಾಕರವಾಣಿ
News

ಸಚಿವ ಎಚ್ ಕೆ ಪಾಟೀಲ ಅವರಿಂದ ಪೊಲೀಸ್ ವಾಹನ ಲೋಕಾರ್ಪಣೆ

12 Jan 2025

ಪ್ರಭುತ್ವವನ್ನು ಪ್ರಜೆಗಳ ಹತ್ತಿರ ತೆಗೆದುಕೊಂಡು ಹೋಗುವಲ್ಲಿ ಇಲಾಖೆ ಹೆಚ್ಚು ಕ್ರಿಯಾಶೀಲವಾಗಲಿ


ಅಪರಾಧಗಳ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಸರ್ವ ಸಿದ್ದವಾಗಲಿ


ಗದಗ : ಪೊಲೀಸ್ ಇಲಾಖೆ ಅಪರಾಧಗಳು ನಡೆಯುವುದಕ್ಕೂ ಮುನ್ನ ಅವುಗಳ ಸಂಪೂರ್ಣ ನಿಯಂತ್ರಣಕ್ಕೆ ಮುಂದಾಗಬೇಕು ಜೊತೆಗೆ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಸಂಪೂರ್ಣ ಜಾರಿಯಾಗಬೇಕು ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ಅವರು ಹೇಳಿದರು.


ಜಿಲ್ಲಾಡಳಿತ ಭವನದ ಆವರಣದಲ್ಲಿ ರವಿವಾರ ಪೊಲೀಸ್ ಇಲಾಖೆಯಿಂದ ಏರ್ಪಡಿಸಿದ ಪೊಲೀಸ್ ವಾಹನಗಳ ಲೋಕಾರ್ಪಣೆಗೊಳಿಸಿ ಸಚಿವರು ಮಾತನಾಡಿದರು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಎಸ್ ನೇಮಗೌಡ ಅವರು ಹೇಳಿದಂತೆ ಪೊಲೀಸ್ ಇಲಾಖೆಯ ತುರ್ತು ಈ ಆರ್ ಎಸ್ ಎಸ್ ಸೇವೆ 15 ನಿಮಿಷದಿಂದ 9 ನಿಮಿಷಕ್ಕೆ ಸೇವೆ ಒದಗಿಸುವ ಮಟ್ಟಿಗೆ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದಿದ್ದಾರೆ ಇಲಾಖೆಗೆ ಅಭಿನಂದನೆಗಳು ಎಂದರು.


ತುರ್ತು ಈ ಆರ್ ಎಸ್ ಎಸ್ ಸೇವೆ 9 ರಿಂದ 5 ನಿಮಿಷದ ಒಳಗೆ ಸಾರ್ವಜನಿಕರಿಗೆ ತಲುಪಬೇಕು ಎಂದ ಸಚಿವ‌ ಎಚ್. ಕೆ. ಪಾಟೀಲ, ಮೊನ್ನೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಗೃಹ ಸಚಿವರಾದ ಜಿ ಪರಮೇಶ್ವರ್ ಅವರು ಗದಗ ಜಿಲ್ಲೆಯ ಥರ್ಡ್ ಐ ಯೋಜನೆಯ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಇದು ಗದಗ ಜಿಲ್ಲಾ ಪೊಲೀಸರಿಗೆ ಹೆಮ್ಮೆಯ ತರುವ ಕಾರ್ಯವಾಗಿದೆ ಎಂದರು.


ದೂರುಗಳು ನಿಮ್ಮ ಮೇಲೆ ಇರದಂತೆ ಪೊಲೀಸ್ ಇಲಾಖೆ ಪಾರದರ್ಶಕವಾಗಿ ಪ್ರಕರಣಗಳ ತನಿಖೆ ಕೈಗೊಳ್ಳಬೇಕು ಗದಗ ಜಿಲ್ಲಾ ಪೊಲೀಸ್ ಸುಸಂಸ್ಕೃತ ಪೊಲೀಸ್ ಆಗಿದೆ ಎಂದು ಹೆಮ್ಮೆಯಿಂದ ಹೇಳಿದರು. ಪ್ರಕರಣಗಳು ಆಗದಂತೆ ಮುಂಜಾಗ್ರತೆಯಾಗಿ ನಿಗಾ ವಹಿಸಬೇಕು. ಗದಗ ಜಿಲ್ಲೆಯಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ. ಥರ್ಡ್ ಐ ಜಾರಿ ಮೂಲಕ ನಗರದಾದ್ಯಂತ ಸಿಸಿಟಿವಿ ಅಳವಡಿಸಿದ್ದರಿಂದ ಪ್ರಕರಣಗಳ ಭೇದಿಸಲು ಪೊಲೀಸ್ ಇಲಾಖೆಗೆ ಸಹಕಾರಿಯಾಗಿದೆ. ಗದಗ ಉತ್ತಮ ಪೊಲೀಸ್ ಇಲಾಖೆ ಎಂದು ಹೆಸರಾಗಿದೆ ಎಂದು‌ ನುಡಿದರು.


ಪ್ರಭುತ್ವವನ್ನು ಪ್ರಜೆಗಳ ಹತ್ತಿರ ತೆಗೆದುಕೊಂಡು ಹೋಗುವಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕೆಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಹೇಳಿದರು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಎಸ್ ನೇಮಗೌಡ ಮಾತನಾಡಿ, ಪೊಲೀಸ್ ಇಲಾಖೆಗೆ ಶಾಸಕರ ಪ್ರದೇಶ ಅಭಿವೃದ್ಧಿ ನಿಧಿಯಿಂದ ವಾಹನಗಳನ್ನು ಒದಗಿಸಿದ್ದು ಇಲಾಖೆಗೆ ತುಂಬಾ ಸಹಾಯಕವಾಗಿದೆ. ಸರ್ಕಾರದ ನಿಯಮಾನುಸಾರ 15 ವರ್ಷ ಮೀರಿದ ವಾಹನಗಳನ್ನು ಬಳಸುವಂತಿಲ್ಲ ಹಾಗಾಗಿ ಇಲಾಖೆಗೆ ಇನ್ನೂ ಹೆಚ್ಚಿನ ವಾಹನಗಳ ಅಗತ್ಯ ಇದೆ ಎಂದು ತಿಳಿಸಿದರು. 


ಪೊಲೀಸ್ ಇಲಾಖೆ ಜನಸ್ನೇಹಿಯಾಗಿಸಲು ಇಲಾಖೆ ಅಧಿಕಾರಿಗಳು ಸರ್ವಸಿದ್ಧವಾಗಿದ್ದೇವೆ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ತಿಳಿಸಿದರು.


ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರೋಣ ಶಾಸಕರಾದ ಜಿ ಎಸ್ ಪಾಟೀಲ, ಮಾಜಿ ಶಾಸಕ ಡಿಆರ್ ಪಾಟೀಲ, ಗದಗ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ ಬಿ ಅಸೋಟಿ, ತಾಲೂಕ ಅಧ್ಯಕ್ಷ ಅಶೋಕ್ ಮಂದಾಲಿ, ಸಿದ್ದು ಪಾಟೀಲ, ಎಸ್ ಎನ್ ಬಳ್ಳಾರಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿವೇಕಾನಂದ ಗೌಡ ಪಾಟೀಲ ಉಪಸ್ಥಿತರಿದ್ದರು.


ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ ಬಿ ಸಂಕದ, ಡಿ ವೈ ಎಸ್ ಪಿ ವಿದ್ಯಾನಂದ ನಾಯ್ಕ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್ ಎಸ್ ಬುರಡಿ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಇದ್ದರು.