


6th March 2026

4th February 2026
ಗಂಗಾವತಿ.
ತಾಲೂಕಿನ ಆನೆಗೊಂದಿ ಭಾಗದ ಸರ್ವೇ.ನಂ.193 ವ್ಯಾಪ್ತಿಯ ಸರಜಾರಿ ಗುಡ್ಡದಲ್ಲಿ ಯಾವುದೇ ಇಲಾಖೆಯಿಂದ ಪರವಾನಿಗೆಯನ್ನು ಪಡೆದುಕೊಳ್ಳದೇ ಅತೀಕ್ರಮ ಪ್ರವೇಶ ಮಾಡಿ ಉದ್ದನೆಯ ದಾಕ್ಷಿ ಕಲ್ಲು ಕಂಬಗಳನ್ನು ಸಾಗಾಟ ಮಾಡುವ ಪ್ರಕಣದದಲ್ಲಿ 7 ಆರೋಪಿತರಾದ ಅರುಣ ಚವ್ಹಾಣ, ಗುರಪ್ಪ ಶಿಳ್ಳಿ. ಕೃಷ್ಣಮೂರ್ತಿ@ಮೂರ್ತಿ, ಚನ್ನಬಸಪ್ಪ ಕೆ, ನಾಗರಾಜ @ ತಂಗರಾಜ, ಗೋಪಿಮತ್ತು ಕುಮಾರ ಎಂಬ ಆರೋಪಿತರನ್ನು ದೋಷಿಯೆಂದು ಪರಿಗಣಿಸಿ ಆರೋಪಿತರಿಗೆ ಭಾರತೀಯ ದಂಡ ಸಂಹಿತೆ ಕಲಂ 379 ಅಪರಾಧಕ್ಕೆ 3 ವರ್ಷ ಕಾಲ ಸಾದಾ ಸೆರೆಮನೆವಾಸ ಮತ್ಅತು 10 ಸಾವಿರ ದಂಡ ವಿಧಿಸಿದ್ದಾರೆ..
24.7.2021 ರಂದು ಜಾವ 5-45 ಗಂಟೆಯ ಸುಮಾರಿಗೆ ದಾಳಿ ಮಾಡಿ ಆನೇಗುಂದಿ ಗುಡ್ಡದಲ್ಲಿ ಆರೋಪಿತರು ಕಳ್ಳತನ ಮಾಡಿದ್ದ ಲಾರಿಯಲ್ಲಿದ್ದ ರೂ.24,00/ ಬೆಲೆ ಬಾಳುವ 15 ಟನ್ ದ್ರಾಕ್ಷಿ ಕಲ್ಲು ಕಂಬಗಳನ್ನು ಸಾಗಿಸುತ್ತಿರುವಾಗ ಅಂದಿನ ಗಂಗಾವತಿ ಗ್ರಾಮೀಣ ಠಾಣೆ ಪಿಎಸ್ಐಪ್ರಕಾಶ ಉಮಚಗಿ ಜಪ್ತಿ ಮಾಡಿ. ಆರೋಪಿತರ ವಿರುದ್ಧ ಕಲಂ. 447, 379 ಐಪಿಸಿ ಅಡಿ ಪ್ರಕರಣ ದಾಖಲಿಸಿ ಸಾಕ್ಷ್ಯಾಧಾರಗಳ ಸಮೇತ ದೋಷಾರೋಪಣ ಪಟ್ಟಿಯನ್ನು ಅಂದಿನ ತನಿಖಾಧಿಕಾರಿಗಂಗಾವತಿ ಗ್ರಾಮೀಣ ಠಾಣೆಯ ಪಿಎಸ್ ಐ ಪ್ರಕಾಶ ಉಮಚಗಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ಗಂಗಾವತಿ ಪ್ರಧಾನ ಸಿವಿಲ್ ಮತ್ತು ಜೆ. ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ನಾಗೇಶ ಪಾಟೀಲ್ ಆದೇಶಿಸಿದ್ದಾರೆ.
. ಪ್ರಕರಣವನ್ನು ನ್ಯಾಯಾಲಯದ ಮುಂದೆ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ನಿರಂಜನಸ್ವಾಮಿ ಹಿರೇಮಠ ಅವರು ವಾದ ಮಂಡಿಸಿದ್ದರು. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳಾದ ಶ್ರೀಶೈಲ್, ವೆಂಕಟೇಶ, ಅಂಜಿನಿ ಅವರು ಪ್ರಕರಣದ ವಿಚಾರಣೆಯ ಸಮಯದಲ್ಲಿ ಸಾಕ್ಷಿಗಳನ್ನು ಸಲ್ಲುಸುವಲ್ಲಿ ಪ್ರಮುಖ ಪಾತ್ರವಹಿದ್ದರು.

4th February 2026
ಗಂಗಾವತಿ.
ತಾಲೂಕಿನ ಬಸಾಪಟ್ಟಣ ಗ್ರಾಮದ ಹಿಂದು ಯುವಕನೊರ್ವನಿಗೆ ಗಂಗಾವತಿಯ ಮುಸ್ಲಿಂ ಸಮಾಜದ ಕೆಲವು ಯುವಕರು ರಾತ್ರಿ ಸಮಯದಲ್ಲಿ ನಗರದ ಹೊರ ಹೊಲಯದಲ್ಲಿ ಕರೆದುಕೊಂಡು ಹೋಗಿ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಗಂಗಾವತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿತರ ಪೈಕಿ ನಾಲ್ವರನ್ನು ಬಂಧಿಸಿದ್ದಾರೆ.
ಈ ಕುರಿತು ಬುಧವಾರ ನಗರ ಪೊಲೀಸ್ ಠಾಣೆಯಲ್ಲಿ ಬಸಾಪಟ್ಟ ಗ್ರಾಮದ ಯುವಕ ವೆಂಕಟೇಶ ಮಡಿವಾಳ ನೀಡಿರುವ ದೂರಿನ ಆಧಾರದ ಮೇಲೆ ನಗರದ ಮುಸ್ಲಿಂ ಯುವಕರಾದ ಖಾಜಾಫೀರ್, ಅಮೀರ್, ಇಂದ್ರಾವಲಿ ಸೇರಿದಂತೆ ಇನ್ನಿತರರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.
ತಾಲೂಕಿನ ಬಸಾಪಟ್ಟಣ ಗ್ರಾಮದ ವೆಂಕಟೇಶ ತಂದೆ ಸಾಂಬಯ್ಯ ಎಂಬ ೨೭ ವರ್ಷದ ಹಿಂದು ಯುವಕ ಗಂಗಾವತಿ ನಗರದ ಬಸ್ ನಿಲ್ದಾಣದಲ್ಲಿ ತನಗೆ ಪರಿಚಿತವಿರುವ ಬಸಾಪಟ್ಟಣ ಗ್ರಾಮದ ತಮ್ಮ ಮನೆಯ ಪಕ್ಕದಲ್ಲಿರುವ ಮುಸ್ಲಿಂ ಮಹಿಳೆ ಮತ್ತು ಅವರ ಮಕ್ಕಳನ್ನು ಊರಿಗೆ ಕಳುಹಿಸಲು ಗಂಗಾವತಿ ಬಸ್ ನಿಲ್ದಾಣಕ್ಕೆ ಬಂದ ಸಮಯದಲ್ಲಿ ಆರೋಪಿತ ಸುಮಾರು ಹತ್ತಿಪ್ಪತ್ತು ಮುಸ್ಲಿಂ ಯುವಕರ ಗುಂಪು ವೆಂಕಟೇಶ ಎಂಬ ಯುವಕನ್ನು ವಿಚಾರಣೆ ನಡೆಸಿ ಮುಸ್ಲಿಂ ಮಹಿಳೆಯೊಂದಿಗೆ ನೀನು ಏಕೆ ಬಂದಿದ್ದಿ. ಅವರ ಫೋಟೋ ಏಕೆ ಇಟ್ಟುಕೊಂಡಿದ್ದಿ ಎಂದು ತಗಾದೆ ತೆಗೆದಿದ್ದಾರೆ. ಈ ಸಮಯದಲ್ಲಿ ಮಹಿಳೆಯ ಯುವಕ ತನಗೆ ಪರಿಚಿತನೆಂದು ಹೇಳಿದರು ಕೇಳದ ಆರೋಪಿತ ಮುಸ್ಲಿಂ ಯುವಕರು ನಗರದಾದ್ಯಂತ ಸುತ್ತಾಡಿಸಿ ಕೊಪ್ಪಳ ರಸ್ತೆಯ ರೈಲ್ವೆ ಹಳಿಯ ಪಕ್ಕದಲ್ಲಿ ರಾತ್ರಿ ೧೧.೩೦ ಗಂಟೆ ಸುಮಾರಿಗೆ ಕರೆದುಕೊಂಡು ಹೋಗಿ ಮನಸೋ ಇಚ್ಚೆ ತಳಿಸಿ ಹಲ್ಲೆ ಮಾಡಿದ್ದಾರೆ. ಮತ್ತು ಮಹಿಳೆಯನ್ನು ಪ್ರೀತಿ ಮಾಡುತ್ತಿದ್ದೇನೆ ಎಂದು ಹೇಳಿಕೆ ನೀಡುವಂತೆ ಒತ್ತಾಯಿಸಿದ್ದಾರೆ. ಹೇಳಿಕೆ ನೀಡಲು ಹಿಂದೆಟು ಹಾಕಿದರೆ ರೈಲ್ವೆ ಹಳಿಗೆ ಹಾಕಿ ಸಾಯಿಸುತ್ತೇವೆ ಎಂದು ಧಮಕಿ ಹಾಕಿ ಒತ್ತಾಯಪೂರ್ವಕವಾಗಿ ವಿಡಿಯೋ ಮಾಡಿಕೊಂಡು, ಮನಸ್ಸಿಗೆ ಬಂದಂತೆ ಹಲ್ಲೆ ಮಾಡಿ ಬಿಟ್ಟು ಹೋಗಿದ್ದಾರೆ. ನಂತರ ಯುವಕ ಅಲ್ಲಿಂದ ವಾಲ್ಮೀಕಿ ವೃತ್ತದ ಮೂಲಕ ಆಸ್ಪತ್ರೆಗೆ ದಾಖಲಾಗಿ ನಂತರ ಠಾಣೆಗೆ ದೂರು ನೀಡಿರುವುದಾಗಿ ಪೊಲೀಸ್ ಪ್ರಕರಣದಲ್ಲಿ ದಾಖಲಾಗಿದೆ.
ರಾತ್ರಿ ಸಮಯದಲ್ಲಿ ನಗರದ ಬಸ್ ನಿಲ್ದಾಣಕ್ಕೆ ಬಂದ ಮುಸ್ಲಿಂ ಯುವಕರು ಅನುಮಾನ ಬಂದರೆ ನೇರವಾಗಿ ಯುವಕನನ್ನು ಠಾಣೆಗೆ ಕೆರೆದುಕೊಂಡು ಬಂದು ದೂರು ನೀಡುವ ಬದಲು ತಾವೇ ಯುವಕನನ್ನು ಹೊರ ಹೊಲಯಕ್ಕೆ ಕರೆದುಕೊಂಡು ಹೋಗಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಗಂಗಾವತಿಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ನಗರದಲ್ಲಿ ಕೆಲವು ಯುವಕರ ಗುಂಪು ಗುಂಡಾ ಪ್ರವೃತ್ತಿ ಮೆರೆಯುತ್ತಿರುವುದು ಹೆಚ್ಚುತ್ತಿದೆ ಎಂಬ ಆತಂಕ ಜನರಲ್ಲಿ ಮೂಡಿದೆ. ವಿಷಯ ತಿಳಿದು ನಗರಕ್ಕೆ ಆಗಮಿಸಿದ್ದ ಎಸ್ಪಿ ಡಾ.ರಾಮ ಅರಸಿದ್ಧಿ ಮಾಹಿತಿ ಪಡೆದು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಬಾಕ್ಸ್:
ವಿಚಿತ್ರಕಾರಿ ಘಟನೆ: ಎಸ್ಪಿ ದಿಡೀರ್ ಭೇಟಿ
ನಗರದಲ್ಲಿ ಕಳೆದ ದಿನ ರಾತ್ರಿ ಒಬ್ಬ ಯುವಕನನ್ನು ಹತ್ತು ಯುವಕರು ಬೈಕ್ ಮೇಲೆ ಕೂಡಿಸಿಕೊಂಡು ನಗರದಾದ್ಯಂತ ಸಂಚರಿಸಿ ಹೊರ ಹೊಲಯಕ್ಕೆ ಕರೆದುಕೊಂಡು ಹೋಗಿ ಕ್ಷುಲಕ ಕಾರಣಕ್ಕೆ ಮನ ಬಂದಂತೆ ತಳಿಸಿ ಹಲ್ಲೆ ಮಾಡಿರುವ ವಿಚಿತ್ರಕಾರಿ ಘಟನೆ ನಡೆದಿದ್ದು, ವಿಷಯ ತಿಳಿದು ಎಸ್ಪಿ ಡಾ.ರಾಮ ಅರಸಿದ್ಧಿ ಗಂಗಾವತಿ ಧಾವಿಸಿ ವಿಚಾರಣೆ ನಡೆಸಿದ್ದಾರಲ್ಲದೇ ಹಲ್ಲೆಗೆ ಕಾರಣರಾಗಿರುವ ನಾಲ್ವರು ಯುವಕರನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

30th January 2026
ಕೊಪ್ಪಳ
ನಗರದ ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಡಳಿತಾಧಿಕಾರಿ ಬಿ.ಕಲ್ಲೇಶ ಅವರು ಅಕ್ರಮ ಆಸ್ತಿ ಮತ್ತು ಹಣ ಸಂಪಾದನೆ ಮಾಡಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಕಲ್ಲೇಶ ಅವರಿಗೆ ಸಂಬಂಧಿಸಿದ ಭಾಗ್ಯನಗರದ ನವಚೇತನ ಕಾಲೇಜ್, ಅವರ ವಾಸದ ಮನೆ, ಕೀಮ್ಸ್ ಕಚೇರಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಭಾಗ್ಯನಗರದಲ್ಲಿರು ನವಚೇತನ ಕಾಲೇಜಿನಲ್ಲಿ ಕಂಡು ಬಂದಿರುವ ಕಂತೆ ಕಂತೆ ಹಣವನ್ನು ಎಣಿಕೆ ಮಾಡಿದ್ದು, ದಾಖಲೆಗಳನ್ನು ಸರ್ಚ್ ಮಾಡಿದ್ದಾರೆ.
ಶುಕ್ರವಾರ ಬೆಳಂ ಬೆಳಗ್ಗೆ ರಾಯಚೂರು ಲೋಕಾಯುಕ್ತ ಎಸ್ ಪಿ ನೇತೃತ್ವದಲ್ಲಿ ಹಾವೇರಿ, ಗದಗ ಕೊಪ್ಪಳ ಸೇರಿದಂತೆ ಇನ್ನಿತರ ಕಡೆಗಳಿಂದ ಬಂದ 30 ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ನಾಲ್ಕೈದು ಕಡೆಗಳಲ್ಲಿ ಏಕಕಾಲಕ್ಕೆ ದಾಳಿನಡೆಸಿ ಪರಿಶೀಲಿಸಿದ್ದಾರೆ.
ಭಾಗ್ಯನಗರದ ನವಚೇತನ ಶಾಲೆ ಮತ್ತು ಕಾಲೇಜಿನ ಕಚೇರಿಗಳಲ್ಲಿ ಇಟ್ಟಿರುವ ಕಂ೫ಎ ಕಂತೆ ಹಣವನ್ನು ಮಷೀನ್ ನಲ್ಲಿ ಎಣಿಕೆ ಮಾಡಿದ್ದಾರೆ.
ಕೊಪ್ಪಳದ ಭಾಗ್ಯನಗರದ ನವಚೇತನ ಶಾಲೆ, ನವಚೇತನ ವಿಜ್ಞಾನ ಕಾಲೇಜು,ಬಿ ಕಲ್ಲೇಶ್ ಮನೆ ಹಾಗೂ ಅತ್ತೆಯ ಮನೆ, ಜೊತೆಗೆ ಕಲ್ಲೇಶ ಸ್ವಗ್ರಾಮ ಯಲಬುರ್ಗಾ ಚಿಕ್ಕಮನ್ನಾಪೂರ ಗ್ರಾಮದ ಮನೆಯಲ್ಲು ಸರ್ಚ್ ಮಾಡಿದ್ದಾರೆ.
ಕಳೆದ ಹತ್ತಾರು ವರ್ಷಗಳ ಕಾಲ ಕೊಪ್ಒಳದ ಸಮಾಜ ಕಲ್ಯಾಣ ಇಲಾಖೆ ಹಿಂದುಳಿದಬಕಲ್ಯಾಣ ವರ್ಗಗಗಳ ಇಲಾಖೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಯಾಗಿ ಬಿಡು ಬಿಟ್ಟಿದ್ದ ಕಲ್ಲೇಶ, ಬಳ್ಳಾರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಸರಕಾರದ ಅವದಿಯಲ್ಲಿ ನಡೆದಿರುವ ವಾಲ್ಮಿಕಿ ನಿಗಮದ ಹಣ ಲೂಟಿ ಪ್ರಕರಣದಲ್ಲಿ ಇವರನ್ನು ಇಡಿ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ದರು. ವಿಚಾರಣೆಯಲ್ಲಿ ಇಡಿ ಅಧಿಕಾರಿಗಳು ಮುಖ್ಯಮಂತ್ರಿ ಹೆಸರು ಹೇಳುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪ ಹೊರಿಸಿದ್ದರು. ವಾಲ್ಮಿಕಿ ಹಗರಣದಲ್ಲಿ ಅಮನಾತ್ತಾಗಿದ್ದ ಕಲ್ಲೇಶ ಮತ್ತೆ ಸರಕಾರದ ಮೇಲೆ ಪ್ರಭಾವ ಬಳಸಿ ಕೊಪ್ಪಳ ಕಿಮ್ಸ್ ಗೆ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವಾಲ್ಮಿಕಿ ಹಗರಣ ಇನ್ನು ಜೀವಂತ ಇರುವಾಗಲೆ ಲೋಕಾಯುಕ್ತರು ಕೀಮ್ಸ್ ಆಡಳಿತಾಧಿಕಾರಿಯಾಗಿರುವ ಕಲ್ಲೇಶ ಅವರಿಗೆ ಸಂಬಂಧಿಸುದ ಮನೆ, ಕಾಲೇಜ್ ಮತ್ತು ಕೀಮ್ಸ್ ಸೇರಿ ಹಲವೆಡೆ ದಾಳಿ ಮಾಡಿರುವುದು ಸರಕಾರ ಮತ್ತು ಕೊಪ್ಪಳ ಜಿಲ್ಲೆಯ ಜನಪ್ರತಿಗಳಿಗೆ ಸಂಚಲನ ಮೂಡಿಸಿದೆ.

26th January 2026
ಗಂಗಾವತಿ.
ಬಳ್ಳಾರಿಯಲ್ಲಿ ಖಾಸಗಿ ಗನ್ಮ್ಯಾನ್ನಿಂದ ಫೈರಿಂಗ್, ಬಳ್ಳಾರಿಯಲ್ಲಿ ಮನೆಗೆ ಬೆಂಕಿ, ಶಿಡ್ಲಘಟ್ಟದಲ್ಲಿ ಪೌರಾಯುಕ್ತಿಗೆ ಧಮಕಿ, ಹುಬ್ಬಳ್ಳಿಯಲ್ಲಿ ಮಹಿಳೆಯ ಮೇಲೆ ಪೊಲೀಸ್ ದೌರ್ಜನ್ಯ, ಅಕ್ರಮ ಬಾಂಗ್ಲಾ ನುಸುಳುಕೊರರ ವಿರುದ್ಧ ಹೋರಾಟ ನಡೆಸುವವರ ಮೇಲೆ ಪ್ರಕರಣ ದಾಖಲಿಸುವುದು ಹೀಗೆ ನಿತ್ಯ ಹತ್ತಾರು ಪ್ರಕರಣಗಳು ರಾಜ್ಯದಲ್ಲಿ ನಡೆಯುತ್ತಿವೆ. ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಗುಂಡಾ ರಾಜ್ಯವಾಗಿ ಪರಿಣಮಿಸುತ್ತಿದ್ದು, ಕಾಂಗ್ರೆಸ್ಸಿಗರಿಂದ ಭಾರತ ಸಂವಿಧಾನದ ಆಶಯಕ್ಕೆ ಕೊಡಲಿಪೆಟ್ಟು ಕೊಡುತ್ತಿದ್ದಾರೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ಧನರೆಡ್ಡಿ ನೇರವಾಗಿ ಆರೋಪಿಸಿದರು.
ಸೋಮವಾರ ನಗರದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ೭೭ನೇ ಗಣರಾಜ್ಯೋತ್ಸವದ ಸಾರ್ವಜನಿಕ ಧ್ವಜಾರೋಹಣದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಶಾಂತಿಯ ತೋಟವಾಗಿರುವ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ೨೦ ವರ್ಷದ ಹಿಂದಿನ ಬಿಹಾರ ರಾಜ್ಯವನ್ನು ನೆನಪು ಮಾಡಿಕೊಳ್ಳುವಂತಾಗಿದೆ. ಬಳ್ಳಾರಿಯಲ್ಲಿ ಗಲಭೆ ಎಬ್ಬಿಸಿ ತಮ್ಮ ಕಾಂಗ್ರೆಸ್ ಕಾರ್ಯಕರ್ತನಿಗೆ ಗುಂಡು ಹಾರಿಸಿದಂತಹ ಘಟನೆ ನಡೆಸಿದವರ ಬಗ್ಗೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸಮರ್ಥನೆ ಮಾಡಿಕೊಳ್ಳುತ್ತಾರೆ. ಜನಪ್ರತಿನಿಧಿಗಳಿಗೆ ರಕ್ಷಣೆ ಕೊಡಿ ಎಂದು ಮನವಿ ಮಾಡಿದರೆ ಅಮರೇಕಾದಿಂದ ರಕ್ಷಣೆ ಪಡೆದುಕೊಳ್ಳಿ ಎಂದು ಉಡಾಫೆ ಮಾತನಾಡುತ್ತಾರೆ. ಇಲ್ಲಿ ಕೊಪ್ಪಳದ ಸಂಸದ ರಾಜಶೇಖರ ಹಿಟ್ನಾಳ್ ಆನೆಗೊಂದಿಯಲ್ಲಿ ನಡೆದ ವಿದೇಶಿ ಮಹಿಳೆಯರ ಅತ್ಯಾಚಾರ, ಕೊಲೆಯನ್ನು ಸಣ್ಣ ಘಟನೆ ಎಂದು ಉಡಾಫೆ ಹೇಳಿಕೆ ನೀಡುತ್ತಾನೆ. ಯಾವುದೇ ಜಿಲ್ಲೆಯಲ್ಲಿ ಹೋದರು ಕಾಂಗ್ರೆಸ್ ಶಾಸಕರ, ಸಚಿವರ ಮತ್ತು ಅವರ ಪಕ್ಷದ ಮುಖಂಡರು, ಯುವಕರು ಗುಂಡಾಗಳಂತೆ ವರ್ತಿಸುತ್ತಿದ್ದಾರೆ. ಡಾ.ಬಾಬಾ ಸಾಹೇಬ್ ಅವರ ಸಂವಿಧಾನದ ಆಶಯದಂತೆ ನಡೆದುಕೊಳ್ಳುವಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ. ಇಂತಹ ಸಂದರ್ಭದಲ್ಲೂ ನಾನು ಗಂಗಾವತಿ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿದ್ದೇನೆ. ನಗರದ ಕನಕಗಿರಿ ರಸ್ತೆಯಲ್ಲಿ ಸ್ಯಾಟಲೈಟ್ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುತ್ತದೆ. ಅದೇ ರೀತಿ ಹೆಚ್ಕೆಡಿಬಿ ಅನುದಾನದಲ್ಲಿ ನಗರದ ಎಲ್ಲಾ ರಸ್ತೆಗಳ ಅಭಿವೃದ್ಧಿಗೆ ಅನುದಾನ ತರಲಾಗಿದೆ. ಗಣರಾಜ್ಯೋತ್ಸವದಂತಹ ಮಹತ್ವದ ಕಾರ್ಯಕ್ರಮದಲ್ಲಿ ಅಭಿವೃದ್ಧಿ, ಯುವಕರ ಆಶೋತ್ತರಕ್ಕೆ ತಕ್ಕಂತೆ ಚರ್ಚೆಯಾಗಬೇಕು. ಆದರೆ ಕಾಂಗ್ರೆಸ್ ಸರಕಾರದ ಅಕ್ರಮಣಕಾರಿ ನೀತಿಯಿಂದಾಗಿ ಇಂದು ದೌರ್ಜನ್ಯ, ಕೊಲೆ, ಅತ್ಯಾಚಾರದ ಬಗ್ಗೆ ಚರ್ಚೆ ಮಾಡುವಂತಾಗಿದೆ ಎಂದು ರೆಡ್ಡಿ ವಿಷಾದ ವ್ಯಕ್ತಪಡಿಸಿದರು.
ತಹಶೀಲ್ದಾರ ಯು.ನಾಗರಾಜ ರಾಷ್ಟ್ರಧ್ವಜಾರೋಹಣ ಮಾಡಿ ಮಾತನಾಡಿದರು. ಸಂಚಾರಿ ಪಿಎಸ್ಐ ಶಾರದಮ್ಮ ನೇತೃತ್ವದಲ್ಲಿ ಪೊಲೀಸ್, ಎನ್ಸಿಸಿ, ಸ್ಕೌಟ್ ಸೇರಿದಂತೆ ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಪಥ ಸಂಚಲನದ ಮೂಲಕ ಧ್ವಜ ವಂದನೆ ಸಲ್ಲಿಸಲಾಯಿತು. ವಿವಿಧ ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿಯ ನೃತ್ಯ ಪ್ರದರ್ಶನ ಮಾಡಿದರು. ವಿವಿಧ ಸಾಧಕ ವಿದ್ಯಾರ್ಥಿಗಳಿಗೆ ಮತ್ತು ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಬಿಇಓ ಹೆಚ್.ಬಿ.ನಟೇಶ ಸ್ವಾಗತಿಸಿದರು. ಶಿಕ್ಷಕಿ ಜಯಶ್ರೀ ಹಕ್ಕಂಡಿ ನಿರ್ವಹಿಸಿದರು. ನಗರ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಇಲಿಯಾಸ್ ಖಾದ್ರಿ, ನಗರಸಭೆ ಪೌರಾಯುಕ್ತ ವಿರುಪಾಕ್ಷಮೂರ್ತಿ, ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡ, ತಾಪಂ ಇಓ ರಾಮಿರೆಡ್ಡಿ ಪಾಟೀಲ್ ಇದ್ದರು.
ಬಾಕ್ಸ್:
೨೦೨೮ರಲ್ಲೂ ಗಂಗಾವತಿಯಿಂದ ಸ್ಪರ್ಧೆ
ನನಗೆ ಗಂಗಾವತಿ ವಿಧಾನಸಭೆ ಕ್ಷೇತ್ರದ ಜನರು ರಾಜಕೀಯ ಪುನರ್ಜನ್ಮ ನೀಡಿದ್ದಾರೆ. ಹೀಗಾಗಿ ಬರುವ ೨೦೨೮ರ ವಿಧಾನಸಭೆ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಬಳ್ಳಾರಿ ನನ್ನ ಸ್ವಂತ ಊರು ಆಗಿರುವುದರಿಂದ ಬಳ್ಳಾರಿಯಲ್ಲಿ ವಾಸ್ತವ್ಯ ಹೂಡಿದ್ದೇನೆ. ಇತ್ತಿಚೀಗೆ ನಡೆದ ಘಟನೆಯಿಂದಾಗಿ ಅಲ್ಲಿ ಹೆಚ್ಚು ಗಮನ ಕೊಡಬೇಕಾಗಿದೆ. ಎರಡುವರೆ ವರ್ಷದಿಂದ ತಿರುಗಿ ನೋಡದ ಮಾಜಿ ಶಾಸಕ ಅನ್ಸಾರಿ ಕಳೆದ ದಿನ ಕ್ಷೇತ್ರದ ಇರಕಲ್ಗಡಾದಲ್ಲಿ ಬಾಗಿನ್ ಅರ್ಪಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಕಾಂಗ್ರೆಸ್ ಪಕ್ಷ ಮುಳುಗುತ್ತಿದೆ. ೨೦೨೮ರಲ್ಲಿ ಕಾಂಗ್ರೆಸ್ ಎಲ್ಲ ಕಡೆಗಳಲ್ಲಿ ಸರ್ವನಾಶವಾಗುತ್ತದೆ. ಬಳ್ಳಾರಿಯಲ್ಲಿ ಕಾಂಗ್ರೆಸ್ ಶಾಸಕ ಮಾಡಿರುವ ಗಲಭೆಗೆ ಸರಕಾರ ಕ್ರಮ ಕೈಗೊಳ್ಳುತ್ತಿಲ್ಲ. ಇಂತಹ ಹತ್ತಾರು ಘಟನೆಗಳನ್ನು ಜನ ನೋಡಿ ಕಾಂಗ್ರೆಸ್ ಬಗ್ಗೆ ರೋಷಿ ಹೋಗಿದ್ದಾರೆ.
ಗಾಲಿ ಜನಾರ್ಧನರೆಡ್ಡಿ, ಶಾಸಕರು, ಗಂಗಾವತಿ.

14th January 2026
ಕುಷ್ಟಗಿ.
ಜಿಲ್ಲಾ ಯೋಜನಾ ಸಮಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಾ ಆರು ಸ್ಥಾನಗಳನ್ನು ಗೆಲ್ಲುವ ಅವಕಾಶವಿದ್ದರೂ ಕೇವಲ ಎರಡು ಸ್ಥಾನಗಳನ್ನು ಮಾತ್ರ ಗೆಲ್ಲುವಂತಾಗಿರುವುದು ಕಾಂಗ್ರೆಸ್ ಪಕ್ಷದ ದುರದೃಷ್ಟಕರ ಸಂಗತಿಯಾಗಿದೆ. ಸುಲಭ ಗೆಲುವನ್ನು ಮರೆತಿರುವ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಕಾರಣರಾಗಿದ್ದಾರೆ. ಕಾರ್ಯಕರ್ತರನ್ನು ಗೆಲ್ಲಿಸಬೇಕೆಂಬ ಮನಸ್ಸು ಮಾಡಲು ಕಾರ್ಯತಂತ್ರ ಮಾಡದೇ ನಿರ್ಲಕ್ಷ ಮಾಡಿದ್ದಾರೆ ಎಂದು ಕುಷ್ಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ನಾಲತ್ವಾಡ ವಿಷಾದ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಡೆದ ಚುನಾವಣೆ ನಂತರ ಅವರು ಈ ಸೋಲಿಗೆ ವಿಷಾದ ವ್ಯಕ್ತಪಡಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಒಟ್ಟು ೯೬ ಮತದಾರರ ಪೈಕಿ ೯೪ ಮತಗಳು ಚಲಾವಣೆಯಾಗಿವೆ. ಒಂದು ಮತ ತಿರಸ್ಕೃತವಾಗಿದೆ. ಇದರಲ್ಲಿ ಎಲ್ಲಾ ಆರು ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯರು ಆಯ್ಕೆಯಾಗುವ ಅವಕಾಶ ನಿಶ್ಚಿತವಾಗಿ ಇತ್ತು. ಆದರೆ ಸಿದ್ದೇಶಕುಮಾರ ಕಲ್ಲಬಾಗಿಲಮಠ ಮತ್ತು ಈಶಪ್ಪ ಅಮರಪ್ಪ ಮಾತ್ರ ಆಯ್ಕೆಯಾಗಿದ್ದಾರೆ. ಪಕ್ಷ ಬಹುಮತ ಹೊಂದಿದ್ದರೂ, ನಮ್ಮ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವಲ್ಲಿ ವಿಫಲರಾಗಿರುವುದು ಆಶ್ಚರ್ಯ ಮೂಡಿದೆ ಮತ್ತು ಕಾರ್ಯಕರ್ತರ ಮನಸ್ಸಿಗೆ ಬೇಸರವಾಗಿದೆ. ಯೋಜನಾ ಸಮಿತಿಗೆ ಚುನಾವಣೆ ಘೋಷಣೆಯಾದಾಗಿನಿಂದಲೂ, ಚುನಾವಣೆ ತಂತ್ರ ರೂಪಿಸುವ ಗಂಭೀರ ಪ್ರಯತ್ನಗಳು ಜಿಲ್ಲಾ ಮುಖಂಡರಿಂದ ನಡೆಯಲೇ ಇಲ್ಲ. ಪಕ್ಷದ ಶಾಸಕರು, ಸಂಸದರು, ಹಾಗೂ ಜಿಲ್ಲಾ ಘಟಕ ಈ ಕುರಿತು ಸಮನ್ವಯದಿಂದ ಕಾರ್ಯತಂತ್ರ ರೂಪಿಸಲಿಲ್ಲ. ಮತದಾನದ ದಿನದ ಹಿಂದಿನ ದಿನವಾದರೂ ಈ ಕುರಿತು ಸಭೆ ನಡೆಸಿ, ಕಾರ್ಯತಂತ್ರ ರೂಪಿಸಿ, ಪಕ್ಷದ ಮತದಾರರಿಗೆ ಸ್ಪಷ್ಟ ಸಂದೇಶ ರವಾನಿಸದೇ ಕೈ ಚೆಲ್ಲಿ ಕುಳಿತುಕೊಂಡಿದ್ದರು. ನಾವೀಗ ಪಂಚಾಯತ ಚುನಾವಣೆಗಳ ಹೊಸ್ತಿಲಲ್ಲಿ ನಿಂತಿದ್ದೇವೆ. ಇಂತಹ ಸಮಯದಲ್ಲಿ, ಕೈಗೆಟಕಬಹುದಾಗಿದ್ದ ಗೆಲುವೊಂದನ್ನು ಬಿಟ್ಟುಕೊಟ್ಟು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಮತ್ತು ವಿರೋಧ ಪಕ್ಷಕ್ಕೆ ಹಾಸ್ಯಾಸ್ಪದರಾಗಿದ್ದೇವೆ. ಬಹುಮತ ಇದ್ದಾಗ್ಯೂ, ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲಾಗದ ನಮ್ಮನ್ನು ಮತದಾರರು ಪರಿಹಾಸ್ಯ ಮಾಡುತ್ತಿದ್ದಾರೆ. ಇದರಿಂದಾಗಿ, ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ನನ್ನಂಥವರು ಮುಜುಗರ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲಾ ಯೋಜನಾ ಸಮಿತಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎದುರಿಸಿದ ಸೋಲಿನ ಹೊಣೆಯನ್ನು ಈವರೆಗೆ ಯಾರೊಬ್ಬರೂ ಹೊತ್ತುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ, ಫಲಿತಾಂಶದ ಪರಾಮರ್ಶೆ ನಡೆಯಬೇಕು ಎಂಬುದು ನನ್ನ ಮತ್ತು ನನ್ನಂತಹ ಪಕ್ಷದ ನಿಷ್ಠಾವಂತ ಕಾರ್ಯಕರ್ತರೆಲ್ಲರ ಆಗ್ರಹವಾಗಿದೆ. ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣರಾದವರನ್ನು ಗುರುತಿಸಿ, ಅವರ ವಿರುದ್ಧ ಪಕ್ಷದ ಹೈಕಮಾಂಡ್ಗೆ ವರದಿ ಸಲ್ಲಿಸಿ, ಪಕ್ಷದ ನಿಯಮಗಳಾನುಸಾರ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಚಂದ್ರಶೇಖರ ನಾಲತ್ವಾಡ ಅವರು ನೇರವಾಗಿ ಅಗ್ರಹಿಸಿದ್ದಾರೆ.

14th January 2026
ಕೊಪ್ಪಳ.
ಜಿಪಂ ಮತ್ತು ಜಿಲ್ಲಾ ನಗರಾಭಿವೃದ್ಧಿ ಕೋಶದ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳಲ್ಲಿ ಬರುವ ವಿವಿಧ ಯೋಜನೆಗಳ ಅನುಷ್ಟಾನದ ಪ್ರಗತಿಯನ್ನು ಪರಿಶೀಲಿಸಲು ಕರ್ನಾಟಕ ಗ್ರಾಮ ಸ್ವರಾಜ ಮತ್ತು ಪಂಚಾಯತ್ ರಾಜ್( ಜಿಲ್ಲಾ ಯೋಜನಾ ಸಮಿತಿಯ) ಜಿಲ್ಲೆಯ ಪುರಸಭೆ ಮತಕ್ಷೇತ್ರಗಳ ನಗರ ಮತ್ತು ಪಟ್ಟಣ ಪಂಚಾಯತ್ ಸ್ಥಳೀಯ ಸಂಸ್ಥೆಗಳ ಸದಸ್ಯರಲ್ಲಿ ಆರು ಜನ ಸದಸ್ಯರನ್ನು ಯೋಜನಾ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲು ನಡೆದ ಚುನಾವಣೆಯಲ್ಲಿ ನಾಲ್ಕು ಜನ ಬಿಜೆಪಿ ಮತ್ತು ಇಬ್ಬರು ಕಾಂಗ್ರೆಸ್ ಸದಸ್ಯರು ಗೆಲುವು ಸಾಧಿಸಿದ್ದಾರೆ. ಜಿಲ್ಲೆಯ ಐದು ಸ್ಥಳೀಯ ಸಂಸ್ಥೆಗಳಲ್ಲಿ ಅತೀ ಹೆಚ್ಚು ಮತದಾರ ಸದಸ್ಯರು ಕಾಂಗ್ರೆಸ್ ಪಕ್ಷದಲ್ಲಿದ್ದರೂ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವ ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಮತ್ತು ಮಂಡಲ ಬಿಜೆಪಿ ಮುಖಂಡರಿಗೆ ಹರ್ಷವಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಜಿಲ್ಲಾ ಮತ್ತು ಬ್ಲಾಕ್ ಅಧ್ಯಕ್ಷರಿಗೆ ಸೋಲಿನ ಮುಜುಗರ ಎದುರಿಸುವಂತಾಗಿದೆ.
ಮಂಗಳವಾರ ಜಿಲ್ಲಾಡಳಿತ ಭವನದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ನಡೆದ ಚುನಾವಣೆಯ ಮತದಾನ ಪ್ರಕ್ರೀಯೆ ನಂತರ ಸಂಜೆ ಸದಸ್ಯರ ಆಯ್ಕೆಯನ್ನು ಪ್ರಕಟಿಸಲಾಯಿತು. ಜಿಲ್ಲೆಯ ಕಾರಟಗಿ ಪುರಸಭೆ, ಭಾಗ್ಯನಗರ, ಕುಕನೂರು, ಕನಕಗಿರಿ ಮತ್ತು ತಾವರಗೇರಿ ಪಟ್ಟಣ ಪಂಚಾಯತ್ನಲ್ಲಿರುವ ಒಟ್ಟು ೯೪ ಸದಸ್ಯರು ಮತದಾರರಾಗಿದ್ದು, ಆರು ಸ್ಥಾನದ ಆಯ್ಕೆ ನಡೆಸಲಾಗಿದೆ. ಆರು ಸ್ಥಾನಕ್ಕೆ ೧೧ ಜನ ಸ್ಪರ್ಧೆ ಮಾಡಿದ್ದರು. ವಿಶೇಷವಾಗಿ ೯೪ ಸದಸ್ಯರ ಪೈಕಿ ೫೬ ಅತಿ ಹೆಚ್ಚು ಮತದಾರರು ಕಾಂಗ್ರೆಸ್ ಪಕ್ಷದವರಾಗಿದ್ದರೂ ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಸದಸ್ಯರು ಅತಿ ಹೆಚ್ಚು ಮತ ಪಡೆದು ಗೆಲುವು ಸಾಧಿಸಿದ್ದಾರೆ. ಆದರೆ ಕಾಂಗ್ರೆಸ್ಸಿನ ಇಬ್ಬರು ಮಾತ್ರ ಆಯ್ಕೆಯಾಗಿರುವುದು ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಿಡಿತ ಕಡಿಮೆಯಾಗುತ್ತಿರುವುದು ಗೋಚರವಾಗುತ್ತಿದೆ.
ಆರು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಭಾಗ್ಯನಗರ ಪಂಪ ಸದಸ್ಯ ಪರಶುರಾಮನಾಯಕ(೪೬ ಮತ) ಕುಕನೂರು ಪಂಪಂನ ಬಾಲರಾಜ ಗಾಳಿ(೪೯ಮತ) ತಾವರಗೇರಿ ಪಂಪಣ ಶಿವನಗೌಡ(೪೬ಮತ) ಮತ್ತು ಕಾರಟಗಿ ಪುರಸಭೆಯ ಬಿಜೆಪಿ ಸದಸ್ಯ ಸೋಮಶೇಖರಪ್ಪ ಬೆರಿಗಿ (೫೧ ಮತ) ಗೆಲುವು ಸಾಧಿಸಿದ್ದರೆ. ಕಾಂಗ್ರೆಸ್ ಪಕ್ಷದ ಕಾರಟಗಿ ಪುರಸಭೆಯ ಈಶಪ್ಪ ಇಟ್ಟಂಗಿ (೪೬ಮತ) ಮತ್ತು ಕನಕಗಿರಿ ಪಂಪಂನ ಸಿದ್ಧೇಶಕುಮಾರ ಕಲಬಾಲುಮಠ (೫೪ ಮತ)ಗೆಲುವು ಸಾಧಿಸಿದ್ದಾರೆ.
ಚುನಾವಣೆ ಫಲಿತಾಂಶ ಹೊರ ಬರುತ್ತಿದ್ದಂತೆ ಬಿಜೆಪಿ ಮುಖಂಡರು ಜಿಲ್ಲಾಡಳಿತ ಕಚೇರಿ ಬಿಜೆಪಿ ಸದಸ್ಯರ ವಿಜಯೋತ್ಸವದಲ್ಲಿ ಎಂಎಲ್ಸಿ ಹೇಮಲತಾ ನಾಯಕ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಸಚಿವ ಹಾಲಪ್ಪ ಆಚಾರ, ಬಿಜೆಪಿ ಮುಖಂಡ ಡಾ.ಬಸವರಾಜ.ಕೆ ಮತ್ತಿತರ ಮುಖಂಡರು ಹರ್ಷ ವ್ಯಕ್ತಪಡಿಸಿದರು.
ಆರು ಜನ ಸದಸ್ಯರು ತಮ್ಮ ಪಕ್ಷದವರೇ ಆಯ್ಕೆಯಾಗುವ ಅವಕಾಶವಿದ್ದರೂ ಕಾಂಗ್ರೆಸ್ ಪಕ್ಷದ ಜಿಲ್ಲಾ ಮುಖಂಡರ ನಿರ್ಲಕ್ಷದಿಂದ ಸೋಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ಬಾಕ್ಸ್:
ಕಾಂಗ್ರೆಸ್ ಪಕ್ಷದ ದುರಾದುಷ್ಟ
ಕಾಂಗ್ರೆಸ್ ಪಕ್ಷದಲ್ಲಿ ಜಿಲ್ಲಾ ಉಸ್ತುವಾರಿ, ಸಂಸದರು, ಶಾಸಕರು ಇದ್ದು, ಐದು ಸ್ಥಳೀಯ ಸಂಸ್ಥೆಯಲ್ಲಿ ಅತಿ ಹೆಚ್ಚು ಕಾಂಗ್ರೆಸ್ ಪಕ್ಷದ ಸದಸ್ಯರು ಇದ್ದರೂ ಸಹ ಜಿಲ್ಲಾ ಅನುಷ್ಟಾನ ಸಮಿತಿ ಸದಸ್ಯರ ಚುನಾವಣೆಯ ಆರು ಸ್ಥಾನದಲ್ಲಿ ಕೇವಲ ಇಬ್ಬರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷದ ದುರಾದುಷ್ಟಕರ ಸಂಗತಿಯಾಗಿದೆ. ಮೂರು ಭಾರಿ ಶಾಸಕರಾಗಿ ಈಗ ಜಿಲ್ಲಾಧ್ಯಕ್ಷರಾಗಿರುವ ಅಮರೇಗೌಡ ಬಯ್ಯಾಪುರ, ಸಚಿವ ತಂಗಡಗಿ, ಸಂಸದ, ಶಾಸರಕಾಗಿರುವ ಹಿಟ್ನಾಳ್ ಸಹೋದರರು ಜಿಲ್ಲಾ ಕಾಂಗ್ರೆಸ್ಸಿಗೆ ಶಕ್ತಿ ತುಂಬುವಲ್ಲಿ ನಿರ್ಲಕ್ಷ ಮಾಡಿದ್ದಾರೆ. ಈ ಸೋಲು ಪಕ್ಷಕ್ಕೆ ಮುಜುಗರವಾಗಿದೆ.
ಚಂದ್ರಶೇಖರ ನಾಲತ್ವಾಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕುಷ್ಟಗಿ.

24th November 2025
ಗಂಗಾವತಿ.
ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಶೀಘ್ರದಲ್ಲೇ ಈ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬಸವರಾಜಸ್ವಾಮಿ ಮಳಿಮಠ ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಅವರು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ೨೦೨೩ರ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ೧೪೦ ಸ್ಥಾನಗಳೊಂದಿಗೆ ಸರಕಾರ ರಚಿಸಿದೆ. ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ ಅವರು ಅತ್ಯಂತ ಚಾಣಕ್ಷಣತನದಿಂದ ಮತ್ತು ಶಕ್ತಿಮೀರಿ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತರುವುದು ದೊಡ್ಡ ಪ್ರಯತ್ನ ಮಾಡಿದ್ದಾರೆ. ಅವರನ್ನು ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಮಾಡುವ ಭರವಸೆ ಈ ಹಿಂದೆ ನೀಡಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನಡುವೆ ಅತ್ಯಂತ ಸಮನ್ವಯತೆ ಇದೆ. ಹೀಗಾಗಿ ಸರಕಾರ ಎರಡುವರೆ ವರ್ಷದಲ್ಲಿ ಯಶಸ್ವಿಯಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಅಭಿವೃದ್ಧಿಯ ದಾಪುಗಾಲು ಹಾಕುತ್ತಿದೆ. ಹೈಕಮಾಂಡ್ ನಿರ್ಧಾರದಂತೆ ಎರಡುವರೆ ವರ್ಷದ ನಂತರ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿಯಾಗುವ ವಿಶ್ವಾಸ ರಾಜ್ಯದ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಗೆ ಇದೆ. ಹೀಗಾಗಿ ಶೀಘ್ರ ಅವರು ಮುಖ್ಯಮಂತ್ರಿಯಾಗುವುದು ನಿಶ್ಚಿತವಾಗಿದೆ ಎಂದು ಮಳಿಮಠ ತಿಳಿಸಿದ್ದಾರೆ.

19th October 2025
ಕೊಪ್ಪಳ.
ಇತ್ತಿಚಿಗೆ ಗಂಗಾವತಿ ನಗರದಲ್ಲಿ ನಡೆದಿರುವ ಬಿಜೆಪಿ ಯುವ ಮೋರ್ಚಾ ಮುಖಂಡ ಕೆ.ವೆಂಕಟೇಶ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ರವಿ ಪತ್ನಿ ಚೈತ್ರಾ ಸೇರಿ ಮೂರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ರವಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಇದುವರೆಗೂ ರವಿ ಪತ್ತೆಯಾಗಿಲ್ಲ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಿಂದ ಮಾಹಿತಿ ಲಭ್ಯವಾಗಿದೆ. ಕಳೆದ ಅ.೮ ರಂದು ಕೆ.ವೆಂಕಟೇಶನನ್ನು ಗಂಗಾವತಿ ನಗರದ ರಾಯಚೂರು ರಸ್ತೆಯಲ್ಲಿ ಐದಾರು ಜನ ಆರೋಪಿಗಳು ಮಚ್ಚಿನಿಂದ ಕೊಲೆ ಮಾಡಿದ್ದರು. ಮರುದಿನವೇ ನಾಲ್ವರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದರು. ಆದರೆ ಈ ಪ್ರಕರಣದಲ್ಲಿ ರವಿ ಎಂಬ ವ್ಯಕ್ತಿ ಮತ್ತು ಆತನ ಕೆಲವು ಸಹಚರರು ಭಾಗಿಯಾಗಿದ್ದು, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೊಲೆಯಾದ ವೆಂಕಟೇಶ ತಂದೆ ದೂರು ನೀಡಿದ್ದರು. ಹೀಗಾಗಿ ರವಿ ಬಂಧನಕ್ಕೆ ಗಂಗಾವತಿ ಪೊಲೀಸರು ಸ್ಕೆಚ್ ಹಾಕಿದ್ದರೂ ಇದುವರೆಗೂ ರವಿ ಸಿಗದೇ ತಲೆ ಮರೆಸಿಕೊಂಡಿದ್ದಾನೆ. ಈ ನಡುವೆ ಬಳ್ಳಾರಿಯ ರಾಘವೇಂದ್ರ ಕಾಲೋನಿಯ ಮಹ್ಮದ್ ಅಲ್ತಫ್ ತಂದೆ ಮೆಹಬೂಬ್ ಪಾಷಾ, ದಾದಾಫೀರ್ ತಂದೆ ಅಬ್ದುಲ್ ರವೂಫ್ ಮತ್ತು ಗಂಗಾವತಿ ನಗರದ ಲಿಂಗರಾಜ ಕ್ಯಾಂಪಿನ ಪ್ರಸ್ತುತ ಬಳ್ಳಾರಿ ರಾಘವೇಂದ್ರ ಕಾಲೋನಿಯಲ್ಲಿ ವಾಸವಾಗಿದ್ದ ಚೈತ್ರ ರವಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ರಾಮ ಅರಸಿದ್ದಿ ಅವರು ಮಾಹಿತಿ ನೀಡಿದ್ದು, ಕೆ.ವೆಂಕಟೇಶ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುತ್ತಿದೆ. ನಾಲ್ವರು ಕೊಲೆಯಾದ ದಿನವೇ ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದು, ಇಂದು ಮೂರು ಜನರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ರವಿಯನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದರು.

15th October 2025
ಕೊಪ್ಪಳ.
ಕೊಪ್ಪಳ ತಾಲೂಕಿನ ಯಲಮೇಗಿ ಗ್ರಾಮದ ದಲಿತ ಸಂಘಟನೆ ಮುಖಂಡ ಹಾಗೂ ಕರ್ನಾಟಕ ಕಾಂಗ್ರೆಸ್ ಪಕ್ಷದ ಸದಸ್ಯ ಗಾಳೆಪ್ಪ ಹಿರೇಮನಿ ಮೇಲೆ ಠಾಣೆಯಲ್ಲೇ ಜಾತಿ ನಿಂದನೆಯೊಂದಿಗೆ ಹಲ್ಲೆ ಮಾಡಿರುವ ಘಟನೆ ಗಂಭೀರ ಸ್ವರೂಪ ಪಡೆಯುವುದನ್ನು ಅರಿತ ಎಸ್ಪಿ ಡಾ|| ರಾಮ್ ಅರಸಿದ್ಧಿ ಅವರು ರಾತ್ರೋ ರಾತ್ರಿ ಕುಕನೂರ ಪೊಲೀಸ್ ಠಾಣೆ ಪಿಎಸ್ಐ ಗುರುರಾಜ್ ಅವರನ್ನು ಅಮಾನತ್ ಮಾಡಿ ವಾತಾವರಣ ತಿಳಿಗೊಳಿಸಿದ್ದಾರೆ.
ಮಂಗಳವಾರ ಸಂಜೆ ಘಟನೆ ನಡೆದಿದ್ದು, ಘಟನೆಯನ್ನು ಖಂಡಿಸಿ ಕೊಪ್ಪಳ ಜಿಲ್ಲೆಯ ಡಿಎಸ್ಎಸ್ ಮುಖಂಡ ಮಲ್ಲು ಪೂಜಾರ ಮತ್ತಿತರ ಕಾರ್ಯಕರ್ತರು ದಿಡೀರ್ ಕುಕನೂರ ಪೊಲೀಸ್ ಠಾಣೆಗೆ ಆಗಮಿಸಿ ಪಿಎಸ್ಐ ಮಾಡಿರುವ ಹಲ್ಲೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ವಿಷಯ ಜಿಲ್ಲೆಯಾದ್ಯಂತ ಹರಡಿ ಗಂಭೀರ ಸ್ವರೂಪ ಪಡೆದುಕೊಳ್ಳುವಷ್ಟರಲ್ಲಿ ಎಚ್ಚೆತ್ತ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಯಲಬುರ್ಗಾ ಸಿಪಿಐ ಅವರ ವರದಿ ಮತ್ತು ಠಾಣೆಯಲ್ಲಿ ನಡೆದ ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಮಂಗಳವಾರ ತಡರಾತ್ರಿ ಕುಕನೂರು ಠಾಣೆ ಪಿಎಸ್ಐನ್ನು ಅಮಾನತ್ ಮಾಡಿ ಆದೇಶಿಸಿದ್ದಾರೆ.
ಕೊಪ್ಪಳ ತಾಲೂಕಿನ ಯಲಮೇಗಿ ಗ್ರಾಮದ ಡಿಎಸ್ಎಸ್ ಮುಖಂಡ ಹಾಗೂ ಕೆಪಿಸಿಸಿ ಸದಸ್ಯರಾಗಿರುವ ಗಾಳೇಪ್ಪ ಹಿರೇಮನಿ ಮಂಗಳವಾರ ಕುಕನೂರ ಠಾಣೆಗೆ ಆಗಮಿಸಿ ತಮ್ಮ ಗ್ರಾಮದ ದಂಪತಿಗಳ ನಡುವೆ ಉಂಟಾದ ವಿವಾದ ಕುರಿತು ವಿಚಾರಿಸಲು ಆಗಮಿಸಿದ ಸಂದರ್ಭದಲ್ಲಿ ಪಿಎಸ್ಐ ಗುರುರಾಜ್ ಏಕಾ ಏಕಿ ಗಾಳೆಪ್ಪ ಹಿರೇಮನಿಗೆ ಅವಾಚ್ ಶಬ್ಧನಿಂದ ಮತ್ತು ಜಾತಿ ನಿಂದನೆ ಮಾಡಿ ಮಾರಾಣಾಂತಿಕವಾಗಿ ಠಾಣೆಯಲ್ಲಿ ಹಲ್ಲೆ ಮಾಡಿದ್ದಾರೆ. ಹಲ್ಲೆಯಾಗುತ್ತಿದ್ದಂತೆ ಠಾಣೆಯಿಂದ ಹೊರ ಬಂದ ಗಾಳೆಪ್ಪ ತಮ್ಮ ಡಿಎಸ್ಎಸ್ ಸಂಘಟನೆಗಳ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ವಿಷಯ ತಿಳಿಸಿ ಮತ್ತು ಸಾಮಾಜಿಕ ತಾಣಗಳಲ್ಲಿ ವಿಡಿಯೋ ಮೂಲಕ ಪಿಎಸ್ಐ ನಡೆದುಕೊಂಡ ರೀತಿಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ವಿಷಯ ತಿಳಿದು ತಕ್ಷಣ ಜಿಲ್ಲೆಯ ವಿವಿಧ ದಲಿತ ಮತ್ತು ಮಾದಿಗ ಸಮಾಜದ ಮುಖಂಡರು ಕುಕನೂರ ಠಾಣೆಗೆ ಆಗಮಿಸಿ ಪ್ರತಿಭಟನೆ ನಡೆಸಿ ಹಲ್ಲೆಯನ್ನು ಖಂಡಿಸಿದ್ದಾರಲ್ಲದೇ ಪಿಎಸ್ಐ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಪ್ರತಿಭಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಯಲಬುರ್ಗಾ ಸಿಪಿಐ ಎಸ್ಪಿಗೆ ಘಟನೆಯ ಮಾಹಿತಿ ರವಾನಿಸಿ ವರದಿ ಸಲ್ಲಿಸಿದ್ದಾರೆ. ದಲಿತ ಸಂಘಟನೆಯ ಮುಖಂಡರ ಆಕ್ರೋಶವನ್ನು ಅರಿತ ಎಸ್ಪಿ ಘಟನೆ ಜಿಲ್ಲೆಯಾದ್ಯಂತ ವಾತಾವರಣ ಗಂಭೀರ ಸ್ವರೂಪ ಪಡೆದುಕೊಳ್ಳುವ ಮುಂಚೆ ರಾತ್ರಿ ಪಿಎಸ್ಐ ಗುರುರಾಜ ಅವರನ್ನು ಅಮಾನತು ಮಾಡಿ ಆದೇಶಿಸಿ ಪ್ರತಿಭಟನೆಕಾರರನ್ನು ಸಮಾಧಾನಗೊಳಿಸಿದ್ದಾರೆ. ತಮ್ಮ ಪ್ರತಿಭಟನೆಗೆ ಸ್ಪಂದಿಸಿ ತಪ್ಪಿತಸ್ಥ ಪಿಎಸ್ಐ ವಿರುದ್ಧ ಶಿಸ್ತು ಕ್ರಮ ಕೈಗೊಂಡಿರುವುದಕ್ಕೆ ದಲಿತ ಸಂಘಟನೆ ಮುಖಂಡರು ಎಸ್ಪಿಗೆ ಅಭಿನಂದಿಸಿದ್ದಾರೆ.
ಬಾಕ್ಸ್:
ಪಿಎಸ್ಐ ಗುರುರಾಜ್ ಧರ್ಪ ಮಾಡಿದ್ದಾರೆ
ನಮ್ಮ ಸಮಾಜದ ಹಾಗೂ ದಲಿತ ಸಂಘಟನೆ ಮುಖಂಡ ಹಾಗೂ ಕೆಪಿಸಿಸಿ ಸದಸ್ಯ ಗಾಳೇಪ್ಪ ಹಿರೇಮನಿ ಅವರು ತಮ್ಮ ಗ್ರಾಮದ ದಂಪತಿಗಳ ವಿವಾದ ಕುರಿತು ವಿಚಾರಿಸಲು ಕುಕನೂರು ಠಾಣೆಗೆ ಬಂದಾಗ ಅಲ್ಲಿನ ಪಿಎಸ್ಐ ಗುರುರಾಜ ಶಾಂತತೆಯಿಂದ ವಿಷಯ ಸ್ಪಷ್ಟಪಡಿಸುವ ಬದಲು ಗಾಳೆಪ್ಪ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತಮ್ಮ ಧರ್ಪ ತೋರಿದ್ದಾರೆ. ಠಾಣೆಯಲ್ಲೇ ಗಾಳೆಪ್ಪ ಮೇಲೆ ಹಲ್ಲೆ ಮಾಡುವಂತಹ ಮನಸ್ಥಿತಿ ಬಂದಿರುವುದು ಖಂಡನೀಯವಾಗಿದೆ. ಪಿಎಸ್ಐ ವರ್ತನೆಯನ್ನು ನಾವು ಖಂಡಿಸಿದ್ದರಿಂದ ಎಸ್ಪಿ ಅವರು ನಿಜ ಸಂಗತಿಯನ್ನು ಪರಿಶೀಲಿಸಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದಾರೆ. ದಲಿತ ಮುಖಂಡರ ಮೇಲೆ ಈ ರೀತಿ ವರ್ತಿಸಿರುವ ಪಿಎಸ್ಐ ಸಾಮಾನ್ಯ ಜನರು ಠಾಣೆಗೆ ಬಂದಾಗ ಯಾವ ರೀತಿ ವರ್ತಿಸಬಹುದು. ಪಿಎಸ್ಐ ವರ್ತನೆಗೆ ಸಾಮಾನ್ಯ ಜನರು ಭಯಭೀತರಾಗಿದ್ದಾರೆ. ಇಂತಹ ಅಧಿಕಾರಿಗಳನ್ನು ಕೇವಲ ಅಮಾನತ್ ಅಲ್ಲ ಡಿಸ್ಮಿಸ್ ಮಾಡಬೇಕು.
ಮಲ್ಲು ಪೂಜಾರ್ ದಲಿತ ಸಂಘಟನೆ ಮುಖಂಡ, ಕೊಪ್ಪಳ.