

14th July 2025

ಬಳ್ಳಾರಿ ಜುಲೈ 11: ರಾಯಚೂರು , ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ 12 ನಿರ್ದೇಶಕರ ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆದಿದ್ದು, ಚುನಾವಣೆಯಲ್ಲಿ ಆಯ್ಕೆಯಾದ ನೂತನ ನಿರ್ದೇಶಕರಿಗೆ ಚುನಾವಣೆ ಅಧಿಕಾರಿ ಪ್ರಮೋದ್ ಅವರು ಪ್ರಮಾಣ ಪತ್ರಗಳನ್ನು ವಿತರಿಸಿದರು.
ಚುನಾವಣೆಯಲ್ಲಿ ವಿಜಯಿ ಆದವರ ವಿವರಗಳು, ಕೊಪ್ಪಳ ಜಿಲ್ಲೆ: ಕೃಷ್ಣಾ ರೆಡ್ಡಿ 106 ಮತಗಳು, ಮಹಿಳಾ ಕ್ಷೇತ್ರದಿಂದ ಕುಕನೂರಿನ ಕಮಲವ್ವ 92 ಮತಗಳು, ಮಂಜುನಾಥ್ 94, ಎನ್.ಸತ್ಯನಾರಾಯಣ 93 ಮತಗಳನ್ನು ಪಡೆದು ಆಯ್ಕೆಯಾದರು. ರಾಯಚೂರು ಜಿಲ್ಲೆ: ಬಿ.ಪ್ರವೀಣ್ ಕುಮಾರ್ 31 ಮತಗಳು, ಅಮರಗುಂಡಪ್ಪ 31 ಮತಗಳು, ಭೀಮನಗೌಡ 24 ಮತಗಳು, ಮಹಿಳಾ ಕ್ಷೇತ್ರದಿಂದ ಎನ್.ಸೀತಾರಾಮ ಲಕ್ಷ್ಮಿ ಅವರು 28 ಮತಗಳನ್ನು ಪಡೆದು ಆಯ್ಕೆಯಾದರು. ಅಖಂಡ ಬಳ್ಳಾರಿ ಜಿಲ್ಲೆ: ಎಲ್.ಬಿ.ಪಿ. ಭೀಮಾ ನಾಯ್ಕ್ 183 ಮತಗಳು, ಎಚ್. ಮರಳುಸಿದ್ದಪ್ಪ 165, ಐಗೋಳು ಚಿದಾನಂದ 159 ಮತಗಳು, ಮಹಿಳಾ ಕ್ಷೇತ್ರದಿಂದ ರತ್ನಮ್ಮ ಎಚ್ 147 ಮತಗಳನ್ನು ಪಡೆದು ಆಯ್ಕೆಯಾದರು ಎಂದು ಚುನಾವಣೆ ಅಧಿಕಾರಿ ಪ್ರಮೋದ್ ಅವರು ಅಧಿಕೃತವಾಗಿ ಘೋಷಿಸಿ, ಪ್ರಮಾಣ ಪತ್ರಗಳನ್ನು ವಿತರಿಸಿದರು. ಫಲಿತಾಂಶ ಹೊರ ಬೀಳುತ್ತಿದ್ದಂತೆ ಜಮಾಯಿಸಿದ್ದ ಅಪಾರ ಬೆಂಬಲಿಗರು, ಅಭಿಮಾನಿಗಳು ನಗರದ ರಾಬಕೋವಿ ಹಾಲು ಒಕ್ಕೂಟದ (ಕೆಎಂಎಫ್) ಕಚೇರಿ ಬಳಿಯ ಶ್ರೀ ಕನಕದಾಸ ವೃತ್ತದ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ನಗರದ ರಾಬಕೋವಿ ಹಾಲು ಒಕ್ಕೂಟದ ಕಚೇರಿಯಲ್ಲಿ ಬೆಳಿಗ್ಗೆ ನಿಗಧಿತ ಅವಧಿಯಲ್ಲಿ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಯಿತು. ಮಧ್ಯಾಹ್ನದ ಬಳಿಕ ಚುನಾವಣೆ ಪ್ರಕ್ರಿಯೆ ಬಿರುಸು ಪಡೆದುಕೊಂಡಿತು . ಕೆಎಂಎಫ್ ಮಾಜಿ ರಾಜ್ಯಅಧ್ಯಕ್ಷ ಭೀಮಾ ನಾಯ್ಕ್ ಅವರ ನೇತೃತ್ವದಲ್ಲಿ ಮಧ್ಯಾಹ್ನ ಸುಮಾರು 6 ರಿಂದ 7 ಖಾಸಗಿ ಬಸ್ ಸೇರಿ ವಿವಿಧ ವಾಹನಗಳ ಮೂಲಕ ಮತದಾರರು ಕಛೇರಿಯತ್ತ ಹೆಜ್ಜೆ ಹಾಕಿ, ಸರದಿಯಲ್ಲಿ ನಿಂತು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಈ ವೇಳೆ ಕಚೇರಿ ಬಳಿಯ ಶ್ರೀ ಕನಕದಾಸ ವೃತ್ತದ ಬಳಿ ಹೈಡ್ರಾಮಾ ನಡೆಯಿತು. ಬಸ್ ನಿಂದ ಮತದಾರರು ಕೆಳಗಿಳಿಯುತ್ತಿದ್ದಂತೆ ಸ್ಥಳದಲ್ಲಿದ್ದ ಕೆಲವರು, ದಬ್ಬಾಳಿಕೆಗೆ ಮತ ಹಾಕಬೇಡಿ, ದೌರ್ಜನ್ಯ ನಡೆಯುತ್ತಿದೆ, ಬಡವರನ್ನು ನೋಡಿ, ಬಡವರಿಗೆ, ರೈತರ ಪರವಾಗಿ ದುಡಿಯುವವರಿಗೆ ಮತ ಹಾಕಿ ಬೆಂಬಲಿಸಿ ಎಂದು ಘೋಷಣೆ ಕೂಗಿದರು.
ಪಟಾಕಿ ಸಿಡಿಸಿ ಸಂಭ್ರಮ: ನೂತನ ನಿರ್ದೇಶಕರಾಗಿ ಆಯ್ಕೆಯಾಗುತ್ತಿದ್ದಂತೆ ಚುನಾವಣೆ ಅಧಿಕಾರಿ ಪ್ರಮೋದ್ ಅವರು ಪ್ರಮಾಣ ಪತ್ರಗಳನ್ನು ವಿತರಿಸಿದರು. ಗೆಲುವಿನ ನಗೆಯಲ್ಲಿ ಕಚೇರಿಯಿಂದ ಹೋರ ಬಂದ ನೂತನ ಸದಸ್ಯರಿಗೆ ಅಭಿಮಾನಿಗಳು, ಬೆಂಬಲಿಗರು ಹೂಗುಚ್ಛ ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಯಲಬುರ್ಗಾ ತಾಲೂಕು ಅಧ್ಯಕ್ಷ ಸುಧೀರ್ ಕೋರ್ಲಹಳ್ಳಿ, ಕುಕನೂರು ಪಟ್ಟಣ ಪಂಚಾಯಿತಿ ಸದಸ್ಯ ಗಗನ್ ನೋಟಗಾರ್, ಗಾವರಾಳ ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ
ಶರಣಪ್ಪ ಗಾಂಜಿ, ಮುಖಂಡರಾದ ಮಲ್ಲಿಕಾರ್ಜುನ್ ಜಕ್ಲಿ ಅವರು ನೂತನ ಸದಸ್ಯೆ ಕಮಲವ್ವ ಅವರನ್ನು ಅಭಿನಂದಿಸಿ ಶುಭ ಹಾರೈಸಿದರು. ಇದಕ್ಕೂ ಮುನ್ನ ಕೆಎಂಎಫ್ ಮಾಜಿ ಅಧ್ಯಕ್ಷ ಭೀಮಾ ನಾಯ್ಕ್ ಸೇರಿದಂತೆ ಅವರ ತoಡಡ ನೂತನ ಸದಸ್ಯರು ಪ್ರಮಾಣ ಪತ್ರಗಳನ್ನು ಪಡೆದು, ಗೆಲುವಿನ ನಗೆ ಬೀರಿದರು.

"ಗಡಿನಾಡಿನಲ್ಲಿ ಕಾಸರಗೋಡು ಕನ್ನಡ ಗ್ರಾಮದ ಪರಿಕಲ್ಪನೆ ಅಭಿನಂದನೀಯ" ಎಲ್. ಜಿ.ಜ್ಯೋತಿಶ್ವರ ಅಭಿಮತ