

21st July 2025

ಬಳ್ಳಾರಿ ಜುಲೈ 20. ಬಳ್ಳಾರಿ ನಗರದ ಸಂಗನಕಲ್ಲು ರಸ್ತೆಯಲ್ಲಿರುವ ಕೆ ಆರ್ ಎಸ್ ಕಲ್ಯಾಣ ಮಂಟಪದಲ್ಲಿ ಶ್ರೀ ರಾಮರಾಜು ಫೌಂಡೇಶನ್ ಮತ್ತು ಗೋಪಿ ಬ್ಲಡ್ ಬ್ಯಾಂಕ್ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಸುಮಾರು 500ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದ್ದಾರೆ ಎಂದು ಶ್ರೀ ರಾಮರಾಜು ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀರಾಮರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಶಿಬಿರದಲ್ಲಿ ಮಾತನಾಡಿದ ಶ್ರೀ ರಾಮರಾಜು, ನಮ್ಮ ಫೌಂಡೇಶನ್ ವತಿಯಿಂದ ಸತತ ಮೂರು ವರ್ಷಗಳಿಂದ ರಕ್ತದಾನ ಶಿಬಿರವನ್ನು ಏರ್ಪಡಿಸುತ್ತೇವೆ, ಕಳೆದ ವರ್ಷ ಸುಮಾರು 250ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದ್ದರು, ಈ ಬಾರಿ 500 ಜನಕ್ಕೂ ಹೆಚ್ಚು ಜನರು ರಕ್ತ ನೀಡುವ ಮೂಲಕ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಈ ಶಿಬಿರದಲ್ಲಿ ರಕ್ತದಾನ ಮಾಡಿದವರೆಲ್ಲರಿಗೂ ಪ್ರಮಾಣ ಪತ್ರದ ಜೊತೆ ತಮ್ಮ ಮತ್ತು ತಮ್ಮ ಕುಟುಂಬದ ರಕ್ಷಣೆಗಾಗಿ ಒಂದು ಹೆಲ್ಮೆಟ್ ಅನ್ನು ನೀಡಿ ಸಮಾಜಕ್ಕೆ ನನ್ನ ಅಳಿಲು ಸೇವೆಯನ್ನು ಮಾಡುತ್ತಿದ್ದೇನೆ ಎಂದರು.
ಈ ರಕ್ತದಾನ ಶಿಬಿರಕ್ಕೆ ಮಾಜಿ ಸಚಿವರಾದ ಬಿ ನಾಗೇಂದ್ರ ಭೇಟಿ ನೀಡಿ ರಕ್ತ ದಾನಿಗಳನ್ನು ವಿಚಾರಿಸಿ ರಕ್ತದಾನದ ಮಹತ್ವದ ಬಗ್ಗೆ ತಿಳಿಸಿಕೊಟ್ಟು ನಾವು ಮತ್ತೊಂದು ಜೀವವನ್ನು ಉಳಿಸುವುದಕ್ಕಾಗಿ ಪ್ರತಿಯೊಬ್ಬರು ರಕ್ತದಾನ ಮಾಡಬೇಕೆಂದು ಪ್ರೇರೇಪಿಸಿದರು. ಇದರಲ್ಲಿ ಕಾಂಗ್ರೆಸ್ ಮುಖಂಡರರಾದ ಬೋಯಪಾಟಿ ವಿಷ್ಣುವರ್ಧನ್ ಅವರು ಕೂಡಾ ರಕ್ತದಾನ ಮಾಡಿದರು.
ಈ ರಕ್ತದಾನ ಶಿಬಿರದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು, ಯುವಕರು, ವಕೀಲರು, ರಾಜಕಾರಣಿಗಳು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.
ಈ ರಕ್ತದಾನ ಶಿಬಿರದಲ್ಲಿ ಜಿಲ್ಲಾ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ವೈದ್ಯರು ಮತ್ತು ನರ್ಸ್ ಗಳು ಭಾಗವಹಿಸಿ ಶಿಬಿರದ ಯಶಸ್ಸಿಗೆ ಸಹಕರಿಸಿದರು. ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ಸಹ ಮಾಡಿ ಯಾವುದೇ ಸಮಸ್ಯೆ ಮತ್ತು ತೊಂದರೆ ಇಲ್ಲದಂತೆ ಶಿಬಿರವನ್ನು ನಡೆಸಲಾಯಿತು.

"ಗಡಿನಾಡಿನಲ್ಲಿ ಕಾಸರಗೋಡು ಕನ್ನಡ ಗ್ರಾಮದ ಪರಿಕಲ್ಪನೆ ಅಭಿನಂದನೀಯ" ಎಲ್. ಜಿ.ಜ್ಯೋತಿಶ್ವರ ಅಭಿಮತ