


6th June 2026
ಬಳ್ಳಾರಿ, ಜೂ. 6: ರಾಜಕೀಯದಲ್ಲಿ ಅಧಿಕಾರ ಗಳಿಸುವುದಕ್ಕಿಂತ ಸಮಾಜದಲ್ಲಿ ಶಾಶ್ವತ ಸ್ಥಾನ ಗಳಿಸುವುದು ದೊಡ್ಡ ಸಾಧನೆ. ಚುನಾವಣೆಗಳು ಐದು ವರ್ಷಕ್ಕೊಮ್ಮೆ ಬರುತ್ತವೆ, ಅಧಿಕಾರ ಬರುತ್ತದೆ-ಹೋಗುತ್ತದೆ; ಆದರೆ ಸಮಾಜದಲ್ಲಿ ನಿರ್ಮಾಣವಾಗುವ ಸಂಘಟನೆ, ಆರ್ಥಿಕ ಶಕ್ತಿ, ಶಿಕ್ಷಣದ ಪ್ರಭಾವ ಮತ್ತು ಸಾಂಸ್ಕೃತಿಕ ಅಸ್ತಿತ್ವ ಶತಮಾನಗಳವರೆಗೆ ಉಳಿಯುತ್ತದೆ. ಈ ಸತ್ಯವನ್ನು ಅಹಿಂದ ಪರಿಕಲ್ಪನೆ ಅರಿತುಕೊಳ್ಳಬೇಕಾದ ಕಾಲ ಈಗ ಬಂದಿದೆ ಎಂದು ಸಿಂಧೂರ ಭಾರತ ಪತ್ರಿಕೆಯ ಸಂಪಾದಕ ಹಾಗೂ ವರದಿಗಾರ ಹೊನ್ನುರಸ್ವಾಮಿ ಕೆ.ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಹಿಂದ ಎಂದರೆ ಕೇವಲ ಒಂದು ರಾಜಕೀಯ ಪದವಲ್ಲ. ಅದು ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರ ಕನಸು, ಆಶಯ ಮತ್ತು ಸಾಮಾಜಿಕ ನ್ಯಾಯದ ಸಂಕೇತ. ಆದರೆ ದುರದೃಷ್ಟವಶಾತ್ ಅಹಿಂದ ಎಂಬ ಪದ ಚುನಾವಣೆ ಬಂದಾಗ ಮಾತ್ರ ಹೆಚ್ಚು ಕೇಳಿಬರುತ್ತದೆ. ಚುನಾವಣೆ ಮುಗಿದ ನಂತರ ಅದು ಮತ್ತೆ ರಾಜಕೀಯ ಭಾಷಣಗಳ ಕಡತಗಳಲ್ಲಿ ಸಿಲುಕಿಕೊಳ್ಳುತ್ತದೆ. ಇದು ಬದಲಾಗಬೇಕು.
ಒಂದು ಮರ ನೆರಳು ನೀಡಬೇಕಾದರೆ ಮೊದಲು ಅದರ ಬೇರುಗಳು ಆಳವಾಗಿ ಬೆಳೆಯಬೇಕು. ಅದೇ ರೀತಿ ಒಂದು ಸಮಾಜ ಬಲಿಷ್ಠವಾಗಬೇಕಾದರೆ ಅದರ ಆರ್ಥಿಕತೆ, ಶಿಕ್ಷಣ, ವ್ಯಾಪಾರ, ಉದ್ಯಮ, ಮಾಧ್ಯಮ, ಸಾಹಿತ್ಯ, ಸಂಸ್ಕೃತಿ ಮತ್ತು ಸೇವಾ ಚಟುವಟಿಕೆಗಳು ಬಲವಾಗಬೇಕು. ಕೇವಲ ರಾಜಕೀಯ ಅಧಿಕಾರದಿಂದ ಸಮಾಜದ ಸಂಪೂರ್ಣ ಅಭಿವೃದ್ಧಿ ಸಾಧ್ಯವಿಲ್ಲ.
ಇಂದು ನಾವು ದೇಶದಲ್ಲಿ ಕೆಲವು ಬಲಿಷ್ಠ ಸಂಘಟನೆಗಳನ್ನು ನೋಡುತ್ತೇವೆ. ಅವು ಕೇವಲ ರಾಜಕೀಯದಲ್ಲಿಲ್ಲ. ಶಾಲೆಗಳಲ್ಲಿ ಇವೆ, ಕಾಲೇಜುಗಳಲ್ಲಿ ಇವೆ, ಆಸ್ಪತ್ರೆಗಳಲ್ಲಿ ಇವೆ, ಗ್ರಾಮೀಣ ಸೇವೆಯಲ್ಲಿ ಇವೆ, ಸಾಹಿತ್ಯದಲ್ಲಿ ಇವೆ, ಕ್ರೀಡೆಯಲ್ಲಿ ಇವೆ, ಕೈಗಾರಿಕೆಯಲ್ಲಿ ಇವೆ, ಮಾಧ್ಯಮದಲ್ಲಿ ಇವೆ. ಒಂದು ಚಿಂತನೆ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಬೇರು ಬಿಟ್ಟಾಗ ಮಾತ್ರ ಅದು ಪೀಳಿಗೆಗಳನ್ನು ಪ್ರಭಾವಿಸುತ್ತದೆ. ಅಹಿಂದವೂ ಇದೇ ಪಥದಲ್ಲಿ ಸಾಗಬೇಕಾಗಿದೆ.
ಅಹಿಂದ ಸಮುದಾಯಗಳು ತಮ್ಮ ಶಕ್ತಿಯನ್ನು ಅರಿತುಕೊಳ್ಳಬೇಕು. ಲಕ್ಷಾಂತರ ಜನರಿರುವ ಸಮಾಜಗಳು ಇನ್ನೂ ಆರ್ಥಿಕವಾಗಿ ಪರಸ್ಪರ ಬೆಂಬಲಿಸುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ನಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ಶಾಲೆಗಳು, ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳು, ಯುವಕರಿಗೆ ಅವಕಾಶ ನೀಡುವ ಸಂಸ್ಥೆಗಳು, ಮಹಿಳೆಯರನ್ನು ಸಬಲಗೊಳಿಸುವ ಸಂಘಟನೆಗಳು, ರೈತರನ್ನು ಬೆಂಬಲಿಸುವ ಸಹಕಾರ ಸಂಘಗಳು, ಉದ್ಯಮಿಗಳಿಗೆ ನೆರವಾಗುವ ವಾಣಿಜ್ಯ ವೇದಿಕೆಗಳು ನಿರ್ಮಾಣವಾಗಬೇಕು.
ಒಂದು ಸಮುದಾಯದ ವ್ಯಕ್ತಿ ಅಂಗಡಿ ಆರಂಭಿಸಿದರೆ ಅದನ್ನು ಬೆಳೆಸುವ ಮನೋಭಾವ ಸಮಾಜದಲ್ಲಿ ಬರಬೇಕು. ಒಬ್ಬ ಯುವಕ ಉದ್ಯಮ ಆರಂಭಿಸಿದರೆ ಆತನ ಹಿಂದೆ ಸಮಾಜ ನಿಲ್ಲಬೇಕು. ಒಬ್ಬ ವಿದ್ಯಾರ್ಥಿ ಉನ್ನತ ಶಿಕ್ಷಣ ಪಡೆಯಲು ಮುಂದಾದರೆ ಆತನ ಕನಸಿಗೆ ಸಮುದಾಯ ಶಕ್ತಿ ತುಂಬಬೇಕು. ಈ ಪರಸ್ಪರ ಸಹಕಾರವೇ ಸಮಾಜದ ನಿಜವಾದ ಬಂಡವಾಳ.
ಇಂದು ಅನೇಕ ಸಮುದಾಯಗಳು ತಮ್ಮದೇ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಬ್ಯಾಂಕ್ಗಳು, ಕೈಗಾರಿಕೆಗಳು ಮತ್ತು ಸೇವಾ ಸಂಸ್ಥೆಗಳ ಮೂಲಕ ಆರ್ಥಿಕ ಹಾಗೂ ಸಾಮಾಜಿಕವಾಗಿ ಪ್ರಭಾವಶಾಲಿಯಾಗಿವೆ. ಅಹಿಂದ ಸಮುದಾಯಗಳೂ ಸಹ ತಮ್ಮ ಸಂಘಟನಾ ಸಾಮರ್ಥ್ಯವನ್ನು ಇದೇ ದಿಕ್ಕಿನಲ್ಲಿ ಬಳಸಿಕೊಳ್ಳಬೇಕು. ಯುವಕರು ಉದ್ಯಮಿಗಳಾಗಬೇಕು, ಉದ್ಯಮಿಗಳು ಉದ್ಯೋಗ ಸೃಷ್ಟಿಕರ್ತರಾಗಬೇಕು, ಶಿಕ್ಷಕರು ಜ್ಞಾನ ದೀಪ ಹಚ್ಚಬೇಕು, ಲೇಖಕರು ಸಮಾಜದ ಧ್ವನಿಯಾಗಬೇಕು, ಪತ್ರಕರ್ತರು ಜನರ ಆಶಯಗಳನ್ನು ಪ್ರತಿಬಿಂಬಿಸಬೇಕು.
ಸಮಾಜದಲ್ಲಿ ಗೌರವ ಪಡೆಯಲು ಯಾರನ್ನೂ ವಿರೋಧಿಸುವ ಅಗತ್ಯವಿಲ್ಲ. ಸ್ವತಃ ಬೆಳೆಯುವುದು, ಸಾಧನೆ ಮಾಡುವುದು, ಸಮಾಜಕ್ಕೆ ಕೊಡುಗೆ ನೀಡುವುದು ಮತ್ತು ಸೇವೆಯ ಮೂಲಕ ಜನರ ವಿಶ್ವಾಸ ಗಳಿಸುವುದು ಹೆಚ್ಚು ಶಾಶ್ವತ ಮಾರ್ಗ. ದ್ವೇಷದಿಂದ ಸಂಘಟನೆಗಳು ಬೆಳೆಯುವುದಿಲ್ಲ; ಸೇವೆ, ಶಿಸ್ತು, ಸಂಘಟನೆ ಮತ್ತು ತ್ಯಾಗದಿಂದ ಮಾತ್ರ ಬೆಳೆಯುತ್ತವೆ.
ಅಹಿಂದ ಪರಿಕಲ್ಪನೆ ಕೇವಲ ಮತಗಳ ಲೆಕ್ಕಾಚಾರದಲ್ಲಿ ಸಿಲುಕಿಕೊಳ್ಳಬಾರದು. ಅದು ಜ್ಞಾನ, ಶಿಕ್ಷಣ, ಉದ್ಯಮ, ಸಂಸ್ಕೃತಿ, ಕಲೆ, ಸಾಹಿತ್ಯ, ವಿಜ್ಞಾನ ಮತ್ತು ಸಾಮಾಜಿಕ ಸೇವೆಯ ಕ್ಷೇತ್ರಗಳಲ್ಲೂ ತನ್ನದೇ ಆದ ಗುರುತು ಮೂಡಿಸಬೇಕು. ಅಹಿಂದದ ಯುವಕರು ವೈದ್ಯರಾಗಲಿ, ವಿಜ್ಞಾನಿಗಳಾಗಲಿ, ಉದ್ಯಮಿಗಳಾಗಲಿ, ಆಡಳಿತಗಾರರಾಗಲಿ, ಸಾಹಿತಿಗಳಾಗಲಿ, ಕ್ರೀಡಾಪಟುಗಳಾಗಲಿ – ಪ್ರತಿಯೊಂದು ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರಬೇಕು.
ಗ್ರಾಮ ಮಟ್ಟದಲ್ಲಿ ಸೇವಾ ಸಂಘಟನೆಗಳು, ತಾಲೂಕು ಮಟ್ಟದಲ್ಲಿ ತರಬೇತಿ ಕೇಂದ್ರಗಳು, ಜಿಲ್ಲಾಮಟ್ಟದಲ್ಲಿ ಅಧ್ಯಯನ ಕೇಂದ್ರಗಳು, ರಾಜ್ಯಮಟ್ಟದಲ್ಲಿ ಚಿಂತನಾ ವೇದಿಕೆಗಳು ಮತ್ತು ರಾಷ್ಟ್ರಮಟ್ಟದಲ್ಲಿ ಸಂಶೋಧನಾ ಸಂಸ್ಥೆಗಳು ನಿರ್ಮಾಣವಾದಾಗ ಮಾತ್ರ ಅಹಿಂದ ಒಂದು ಶಕ್ತಿಶಾಲಿ ಸಾಮಾಜಿಕ ಚಳವಳಿಯಾಗಿ ರೂಪುಗೊಳ್ಳುತ್ತದೆ.
ಅಹಿಂದದ ಭವಿಷ್ಯ ಕೇವಲ ರಾಜಕೀಯ ಸಭೆಗಳಲ್ಲಿ ಇಲ್ಲ; ಅದು ಶಾಲೆಗಳ ತರಗತಿಗಳಲ್ಲಿ ಇದೆ. ಅದು ಯುವಕರ ಕನಸುಗಳಲ್ಲಿ ಇದೆ. ಅದು ರೈತರ ಹೊಲಗಳಲ್ಲಿ ಇದೆ. ಅದು ಕಾರ್ಮಿಕರ ಬೆವರಿನಲ್ಲಿ ಇದೆ. ಅದು ಮಹಿಳೆಯರ ಆತ್ಮವಿಶ್ವಾಸದಲ್ಲಿ ಇದೆ. ಅದು ಉದ್ಯಮಿಗಳ ಸಾಹಸದಲ್ಲಿ ಇದೆ. ಅದು ವಿದ್ಯಾರ್ಥಿಗಳ ಪುಸ್ತಕಗಳಲ್ಲಿ ಇದೆ.
ಸಮಾಜದ ಪ್ರಗತಿ ಎಂದರೆ ಕೇವಲ ಅಧಿಕಾರದ ಕುರ್ಚಿ ಅಲ್ಲ; ಮುಂದಿನ ಪೀಳಿಗೆಗೆ ಅವಕಾಶಗಳ ಸಾಮ್ರಾಜ್ಯ ನಿರ್ಮಿಸುವುದು. ಅಹಿಂದ ಸಮುದಾಯಗಳು ಈ ದಿಕ್ಕಿನಲ್ಲಿ ಸಾಗಿದರೆ ಅದು ಕೇವಲ ಒಂದು ರಾಜಕೀಯ ಪರಿಕಲ್ಪನೆಯಾಗಿಯೇ ಉಳಿಯದೆ, ಕರ್ನಾಟಕದ ಸಾಮಾಜಿಕ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯುವ ಮಹಾ ಚಳವಳಿಯಾಗಿ ರೂಪುಗೊಳ್ಳಲಿದೆ.
ಈ ನಿಟ್ಟಿನಲ್ಲಿ ಅಹಿಂದದ ಎಲ್ಲ ಸಮುದಾಯಗಳ ಮುಖಂಡರು, ಯುವಕರು, ಮಹಿಳೆಯರು, ವಿದ್ಯಾರ್ಥಿಗಳು, ಉದ್ಯಮಿಗಳು, ರೈತರು ಮತ್ತು ಬುದ್ಧಿಜೀವಿಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಸ್ವಾಭಿಮಾನ, ಸ್ವಾವಲಂಬನೆ ಮತ್ತು ಸಾಮಾಜಿಕ ನ್ಯಾಯದ ಹೊಸ ಯುಗವನ್ನು ನಿರ್ಮಿಸಬೇಕಾಗಿದೆ ಎಂದು ಹೊನ್ನುರಸ್ವಾಮಿ ಕೆ.ಟಿ ಕರೆ ನೀಡಿದ್ದಾರೆ.

17th May 2026
ಬಳ್ಳಾರಿ:ಮೇ,17- ಎನ್.ಡಿ.ಪಿ.ಎಸ್ ಪ್ರಕರಣಗಳ ಆರೋಪಿ ಡಿ.ದೌಲ ಅಲಿಯಾಸ್ ಎಸ್.ದೌಲನನ್ನು ಸೆರೆಮನೆಯಲ್ಲಿಡಲು ಆದೇಶಿಸಿದ ಆದೇಶಕ್ಕೆ ಸಲಹಾ ಸಮ್ಮತಿಯಿಂದ ಅನುಮೋದನೆ ದೊರೆತಿದೆಂದು ಎಸ್ಪಿ ಅವರ ಪತ್ರಿಕಾ ಪ್ರಕಟಣೆ ತಿಳಿಸಿದೆ.
ನಗರದ ರಾಣಿತೋಟದಡಿ. ದೌಲ ಅಲಿಯಾಸ್ ಎಸ್. ದೌಲಾ ಅಲಿಯಾಸ್ ಮೆಹಬೂಬ್ ದೌಲ (40) ಈತನು ಬಳ್ಳಾರಿ ಜಿಲ್ಲೆ ಒಳಗೊಂಡಂತೆ ರಾಜ್ಯದ್ಯಾಂತ ವಿವಿಧ ಜಿಲ್ಲೆಗಳಲ್ಲಿ ಮಾದಕ ಪದಾರ್ಥಗಳ ಸಂಗ್ರಹಣೆ, ಸಾಗಟ ಹಾಗೂ ಮಾರಟ ಕೆಲಸದಲ್ಲಿ ತೊಡಗಿಕೊಂಡಿದ್ದನು.
ಈತನ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆಯಡಿಯಲ್ಲಿ 21 ಪ್ರಕರಣಗಳು ದಾಖಲಾಗಿದ್ದವು. ನಿರಂತರವಾಗಿ ಈತನು ಮಾದಕ ದ್ರವ್ಯ ಸಾಗಣೆ ಮತ್ತು ಮಾರಟದಲ್ಲಿ ತೊಡಗುವ ಮೂಲಕ ಸಾಮಾಜದ ಸ್ವಾಸ್ಥ್ಯವನ್ನು ಹದಗಡೆಸುತ್ತಿದ್ದನು. ಅದಕ್ಕಾಗಿ ಸಮಾಜದ ಸ್ವಾಸ್ಥ್ಯ ಕಾಪಡುವ ಉದ್ದೇಶದಿಂದ ಕಾಯ್ದೆಯನ್ವಯ ಐಜಿಪಿ ಬಳ್ಳಾರಿರವರಿಗೆ ದೌಲನ ಬಂಧನದ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಐಜಿಪಿ ಹರ್ಷ ಅವರು . ದೌಲನನ್ನು ಒಂದು ವರ್ಷದವರೆಗೆ ಬಂಧನಲ್ಲಿರಿಸಲು ಆದೇಶಿಸಿದ್ದರು.
ಈ ಪ್ರಕರಣವು ಉಚ್ಚ ನ್ಯಾಯಾಲಯದ ನ್ಯಾಯಧೀಶರುಗಳನ್ನು ಒಳಗೊಂಡ ಸಲಹಾ ಸಮಿತಿ ಯಲ್ಲಿ ವಿಚಾರಣೆ ನಡೆದಿತ್ತು. ಎಸ್ಪಿ. ಡ. ಸುಮನ್ ಡಿ.ಪೆನ್ನೇಕರ್, ಹಾಗೂ ಟಿ.ಎಸ್ ಪಾಟೀಲ್, ಹಿರಿಯ ಕಾನೂನು ಸಲಹೆಗಾರರು ಸರ್ಕಾರದ ಪರವಾಗಿ ಸಮಿಯಲ್ಲಿ ವಾದಿಸಿದ್ದರು. ಸಮಿತಿಯ ದೌಲನನ್ನು 12.02.2027 ರ ವರೆಗೆ ಬಂಧನದಲ್ಲಿರಿಸಲು ಸಮ್ಮತಿಸಿದೆ. ಸಧ್ಯ ದೌಲ ಬಳ್ಳಾರಿ ಕೇಂದ್ರ ಕಾರಗೃಹದಲ್ಲಿದ್ದಾನೆ.