
17th June 2025
ಯಾದಗಿರಿ: ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಕೆಲ ಪೊಲೀಸ್ ಠಾಣೆಗಳು ಕಾಂಗ್ರೆಸ್ ಪಕ್ಷದ ಕಚೇರಿಗಳಾಗಿವೆ. ಬಿಜೆಪಿ ಮುಖಂಡರ ಮತ್ತು ಕಾರ್ಯಕರ್ತರ ಮೇಲೆ ದೌರ್ಜನ್ಯ, ಸುಳ್ಳು ಕೇಸ್ ಹಾಕಲಾಗುತ್ತಿದೆ. ಇದು ಬಹಳ ದಿನಗಳ ನಡೆಯುವುದಿಲ್ಲ ಎಂಬುವುದನ್ನು ರಾಜ್ಯದಲ್ಲಿ ಆಳುತ್ತಿರುವ ಕಾಂಗ್ರೆಸ್ ಪಕ್ಷದ ಎಲ್ಲರೂ ಅರಿತುಕೊಳ್ಳಬೇಕು. ಬರುವ ದಿನಗಳಲ್ಲಿ ಜನರೇ ತಕ್ಕಪಾಠ ಕಲಿಸುತ್ತಾರೆಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ ಆರೋಪಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಗೃಹ ಸಚಿವರು ಆಟಕ್ಕುಂಟು ಲೆಕ್ಕಕಿಲ್ಲ ಎಂಬಂತೇ ಇದ್ದಾರೆ. ಏನೇ ಘಟನೆ ಜರುಗಿದರೂ ಗಂಭಿರವಾಗಿ ತೆಗೆದುಕೊಳ್ಳುವುದೇ ಇಲ್ಲ, ಇನ್ನೂ ಕಲಬುರಗಿ ಸೇರಿದಂತೆಯೇ ಆರು ಸಚಿವರು ತಮ್ಮ,ತಮ್ಮ ಜಿಲ್ಲೆಗಳನ್ನು ರಿಪಬ್ಲಿಕ್ ಜಿಲ್ಲೆಗಳನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯವಾಗಿರುವ ಯುವ ಮೋರ್ಚಾ ಆರ್ ಎಸ್ ಎಸ್ ಕಾರ್ಯಕರ್ತರನ್ನು ವ್ಯವಸ್ಥಿತವಾಗಿ ಗುರಿ ಮಾಡಿ ನೋಟಿಸ್ ನೀಡಿ, ಠಾಣೆಗಳಲ್ಲಿ ಕೂಡಿಹಾಕುವುದು ನಡೆದಿದೆ ಮತ್ತು ಬೆದರಿಸುವ ಕೆಲಸ ನಡೆದಿದೆ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ನವರು ಅಧಿಕಾರ ಇದೆ ಎಂದು ಏನೆಲ್ಲ ಮಾಡಿದರೇ ನಾವು ಸುಮ್ಮನ್ನೆ ಇರುವುದಿಲ್ಲ, ಬಿಜೆಪಿ ರಾಜ್ಯಾಧ್ಯಕ್ಷರ ಸಹಿತ ಎಲ್ಲ ಮುಖಂಡರು ಕಾರ್ಯಕರ್ತರ ಬೆನ್ನಿಗೆ ಇದ್ದು, ಯಾರು ಅಂಜಬೇಕಿಲ್ಲ ಎಂದು ಅವರು ಹೇಳಿದರು.
ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಗೌಡ ಮುದ್ನಾಳ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ ಮತ್ತು ಪರಶುರಾಮ ಕುರಕುಂದಾ, ಹಿರಿಯ ಮುಖಂಡ ದೇವೆಂದ್ರನಾಥ ನಾದ್, ಮೌನೇಶ ಬೇಳಿಗೇರಿ, ಜಿಲ್ಲಾ ಮಾಧ್ಯಮ ಸಂಚಾಲಕ ವೀರುಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ ಸೇರಿದಂತೆಯೇ ಇತರರಿದ್ದರು.