


14th January 2026
ಬೆಂಗಳೂರು:
12ನೇ ಶತಮಾನದ ಮಹಾನ್ ಶರಣರು, ವಚನಕಾರರು ಹಾಗೂ ಲಿಂಗಾಯತ ಧರ್ಮದ ಪ್ರಮುಖ ಯೋಗಿಗಳಾದ ಕಾಯಕ ಯೋಗಿ ಸಿದ್ದರಾಮೇಶ್ವರರ ಜಯಂತಿಯನ್ನು ನಗರದ ವಿವಿಧೆಡೆ ಭಕ್ತಿಭಾವದಿಂದ ಆಚರಿಸಲಾಯಿತು.
ಈ ಅಂಗವಾಗಿ ಬೆಂಗಳೂರಿನ ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಬಾಗಿತ್ವದಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಮಾನ್ಯ ಜಿ. ಜಗದೀಶ, ಐ.ಎ.ಎಸ್. ಅವರು ಮಾತನಾಡಿ, “ಕಾಯಕವೇ ಕೈಲಾಸ” ಎಂಬ ಸಿದ್ದರಾಮೇಶ್ವರರ ತತ್ವ ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿದ್ದು, ಶ್ರಮ, ಶಿಸ್ತು ಮತ್ತು ಪ್ರಾಮಾಣಿಕತೆ ಮಾನವ ಬದುಕಿನ ಮೂಲ ಮೌಲ್ಯಗಳಾಗಿವೆ ಎಂದು ಹೇಳಿದರು. ಅವರ ಆದರ್ಶಗಳು ಯುವ ಪೀಳಿಗೆಗೆ ದಾರಿ ತೋರಿಸುವಂತಿವೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಪರಮ ಪೂಜ್ಯ ಮ.ನಿ.ಪ್ರ. ಬಸವ ಶರಣ ಸಂಗಮೇಶ್ ಅವರು ಆಶೀರ್ವಚನ ನೀಡಿ ಮಾತನಾಡಿ, ಜಾತಿ–ಮತ ಭೇದವಿಲ್ಲದೆ ಸಮಾನತೆ ಹಾಗೂ ಮಾನವೀಯತೆಯನ್ನು ಸಾರಿದ ಸಿದ್ದರಾಮೇಶ್ವರರ ವಚನಗಳು ಸಮಾಜ ಸುಧಾರಣೆಗೆ ಮಹತ್ವದ ಕೊಡುಗೆಯಾಗಿವೆ ಎಂದು ಹೇಳಿದರು.
ಬಾಕ್ಸ್
ಕಾಯಕ, ನೈತಿಕತೆ ಮತ್ತು ಸಮಾಜಸೇವೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಿದ್ದರಾಮೇಶ್ವರರ ತತ್ವಗಳು ಇಂದಿನ ಯುವ ಪೀಳಿಗೆಗೆ ಪ್ರೇರಣೆಯಾಗಿವೆ.
ಆನಂದ್ ಸಿ. ತಿರುಮಲ
ರಾಜ್ಯ ಪ್ರಶಸ್ತಿ ವಿಜೇತರು
ಬೆಂಗಳೂರು
ವಕೀಲರಾದ ಜಗದೀಶ್ ಅವರು ಮಾತನಾಡಿ, ಕಾಯಕ ಯೋಗಿ ಸಿದ್ದರಾಮೇಶ್ವರರು ಶ್ರಮಜೀವಿಗಳ ಬದುಕಿಗೆ ಗೌರವ ತಂದ ಮಹಾನ್ ಯೋಗಿಯಾಗಿದ್ದು, ಅವರ ವಚನಗಳು ಅಂಧಶ್ರದ್ಧೆ ಮತ್ತು ವೈಷಮ್ಯಗಳ ವಿರುದ್ಧ ಹೋರಾಡುವ ಶಕ್ತಿಯನ್ನೇ ನೀಡಿವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಆರ್ ಚಂದ್ರಶೇಖರ್ ಎಡಿ ರವರು, ಸಮಾಜದ ನಾಯಕರಾದ ರಾಜ್ಯ ಯುವ ಬ್ರಿಗೇಡ್ ನ ಅಧ್ಯಕ್ಷ ಮುನಿ ಕುಮಾರ್, ರಾಜ್ಯ ಪ್ರಶಸ್ತಿ ವಿಜೇತ ಆನಂದ್ ಸಿ ತಿರುಮಲ,ನಾಗರಾಜ್,ಮುನಿ ನಾರಾಯಣ್, ವೆಂಕಟೇಶ್, ರಂಗನಾಥ್ ಎಲ್ ಪಾತ್ರೋಟಿ, ಸೇರಿದ್ದಂತೆ ವಿವಿಧ ಗಣ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಫೋಟೋ ಕ್ಯಾಪ್ಷನ್
ಕಾಯಕ ಯೋಗಿ ಸಿದ್ದರಾಮೇಶ್ವರ ಜಯಂತಿ ಅಂಗವಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಜಿ. ಜಗದೀಶ್, ಐಎಎಸ್, ಪರಮ ಪೂಜ್ಯ ಮ.ನಿ.ಪ್ರ. ಬಸವ ಶರಣ ಸಂಗಮೇಶ್, ವಕೀಲರಾದ ಜಗದೀಶ್, ರಾಜ್ಯ ಪ್ರಶಸ್ತಿ ವಿಜೇತ ಆನಂದ್ ಸಿ. ತಿರುಮಲ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದ ದೃಶ್ಯ.