ಬಳ್ಳಾರಿ, ಮೇ.29: ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಬಿ-ಖಾತೆ ವಿತರಣೆ, ಫಾರಂ-2 ನೀಡುವಿಕೆ ಹಾಗೂ ಇತರೆ ಸರ್ಕಾರಿ ಸೇವೆಗಳಲ್ಲಿ ಅಕ್ರಮ ಮತ್ತು ವಿಳಂಬ ನಡೆಯುತ್ತಿದೆ ಎಂಬ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ ಹಾಗೂ ಮೂರು ವಲಯ ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದರು.
ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿಗಳು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಶೋಧನಾ ವಾರಂಟ್ ಹೊರಡಿಸಿದ ಹಿನ್ನೆಲೆ, ಬಳ್ಳಾರಿ ಲೋಕಾಯುಕ್ತ ಘಟಕದ ಪೊಲೀಸ್ ಅಧೀಕ್ಷಕ ವಾಸುದೇವರಾಮ ಎನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಬೆಳಿಗ್ಗೆ ಆರಂಭವಾದ ದಾಳಿಯಲ್ಲಿ ಲೋಕಾಯುಕ್ತ ಪೊಲೀಸ್ ಸಿಬ್ಬಂದಿ ಹಾಗೂ ಪಂಚ ಸಾಕ್ಷಿದಾರರೊಂದಿಗೆ ನಾಲ್ಕು ತಂಡಗಳನ್ನು ರಚಿಸಿ ಮಹಾನಗರ ಪಾಲಿಕೆಯ ಮುಖ್ಯ ಕಚೇರಿ ಮತ್ತು ಮೂರು ವಲಯ ಕಚೇರಿಗಳಲ್ಲಿ ದಾಖಲೆಗಳ ಶೋಧನೆ ನಡೆಸಲಾಯಿತು.
ಶೋಧನಾ ವೇಳೆ ಹಲವು ಅಕ್ರಮಗಳು ಬೆಳಕಿಗೆ ಬಂದಿರುವುದಾಗಿ ತಿಳಿದುಬಂದಿದ್ದು, ಬಿ-ಖಾತೆ ಮಂಜೂರು, ಫಾರಂ-2 ವಿತರಣೆ ಹಾಗೂ ಇತರೆ ಆಡಳಿತಾತ್ಮಕ ಪ್ರಕ್ರಿಯೆಗಳ ಸಂಬಂಧ ಹಲವು ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ದಾಖಲೆಗಳ ಪರಿಶೀಲನೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.
ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಎಸ್.ಎಸ್. ಬೀಳಗಿ, ಸಚಿನ್ ಎಸ್. ಚಲವಾದಿ, ಪೊಲೀಸ್ ಇನ್ಸ್ಪೆಕ್ಟರ್ಗಳಾದ ಗುರಣ್ಣ ಎಸ್. ಹೆಬ್ಬಾಳ್, ಸುರೇಶ್ ಎಂ. ಬಾವಿಮನಿ, ರಾಜೇಶ್ ಲಮಾಣಿ, ಅಮರೇಶ ಹುಬ್ಬಳ್ಳಿ ಸೇರಿದಂತೆ ಹಲವರು ಭಾಗವಹಿಸಿದ್ದರು.







