ಬಳ್ಳಾರಿ, ಮೇ 19: ನಗರದ ರಾಘವೇಂದ್ರ ಮಾರ್ಷಲ್ ಆರ್ಟ್ಸ್ ವತಿಯಿಂದ ತರಬೇತಿ ಪಡೆಯುತ್ತಿದ್ದ ಮೂವರು ವಿದ್ಯಾರ್ಥಿಗಳು ಕರಾಟೆಯ ಬ್ಲಾಕ್ ಬೆಲ್ಟ್ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ.
ಮೇ 17ರಂದು ಹೈದರಾಬಾದ್ನ ನಾಯಕ್ ಬುಡೋಕನ್ ಕರಾಟೆ ಅಕಾಡೆಮಿಯ ಮುಖ್ಯಸ್ಥ ಗಣೇಶ್ ನಾಯಕ್ ಅವರ ನೇತೃತ್ವದಲ್ಲಿ ನಡೆದ ಪರೀಕ್ಷೆಯಲ್ಲಿ ಎನ್. ಸಾಯಿ ರಾಮ್, ಕೆ. ಹರ್ಷ ಹಾಗೂ ಬಿ. ಮಣಿ ಮನೋಗ್ನ ಅವರು ಬ್ಲಾಕ್ ಬೆಲ್ಟ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಕಾಕರ್ಲತೋಟದ ಸರ್ಕಾರಿ ಶಾಲೆಯ ಮುಖ್ಯ ತರಬೇತಿ ಕೇಂದ್ರದಲ್ಲಿ ರಾಘವೇಂದ್ರ ಮಾರ್ಷಲ್ ಆರ್ಟ್ಸ್ ವತಿಯಿಂದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಲ್ಲಿಕಾರ್ಜುನ (ಸನ್ನಿ) ಭಾಗವಹಿಸಿ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದರು. ಪೋಷಕರಾದ ತಾಯಣ್ಣ, ಕಾಂಟ್ರಾ ಬಾಬು ಹಾಗೂ ಹರೀಶ್ ಉಪಸ್ಥಿತರಿದ್ದರು.
ಕರಾಟೆ ತರಬೇತಿದಾರರಾದ ರಾಘವೇಂದ್ರ ಕೆ.ಬಿ ಮತ್ತು ಪ್ರಶಾಂತ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವಂತೆ ಪ್ರೋತ್ಸಾಹಿಸಿದರು.







